ದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಲೋಕಸಭಾ ಚುನಾವಣೆಯೂ ಕೂಡ ಸಮೀಪಿಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ನೊಂದಿಗೆ ಹಲವು ವರ್ಷಗಳ ವಿರೋಧ ಮರೆತು ದೇಶದ ಹಿತದೃಷ್ಟಿಯಿಂದ ಮೈತ್ರಿ ಮಾಡಿಕೊಳ್ಳುತ್ತಿರುವುದಾಗಿ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಹೇಳಿದ್ದಾರೆ. 

ಅಮರಾವತಿ : ದೇಶದಲ್ಲಿ ರಾಜಕೀಯ ಚಟುವಟಿಕೆ ಭರದಿಂದ ಸಾಗಿದೆ. ಲೋಕಸಭಾ ಚುನಾವಣೆ ಕೂಡ ಸಮೀಪಿಸಿದ್ದು, ಕಾಂಗ್ರೆಸ್ ಹಾಗೂ ತೆಲುಗುದೇಶಂ ಪಕ್ಷ ಮೊದಲ ಬಾರಿಗೆ ದೇಶದ ಒಳಿತಿಗಾಗಿ ಮೈತ್ರಿ ಮಾಡಿಕೊಳ್ಳುತ್ತಿವೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಡಿಸೆಂಬರ್ 7 ರಂದು ತೆಲಂಗಾಣದಲ್ಲಿ ಚುನಾವಣೆ ನಡೆಯುತ್ತಿದ್ದು, ಕುಕಟ್ ಪಲ್ಲಿಯಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ತಿಳಿಸಿದ್ದಾರೆ. 

ಒಂದು ದೇಶದ ಒಳಿತಿಗಾಗಿ ಕಳೆದ 37 ವರ್ಷಗಳಿಂದ ವಿರೋಧಿಗಳಾಗಿ ಹೋರಾಡುತ್ತಿದ್ದವರು ಮೊದಲ ಬಾರಿಗೆ ಒಂದಾಗಿದ್ದೇವೆ. ರಾಜ್ಯದಿಂದ ರಾಷ್ಟ್ರ ರಾಜಕಾರಣದವರೆಗೂ ಕೂಡ ಒಂದಾಗಿಯೇ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ನಾಯ್ಡು ಹೇಳಿದ್ದಾರೆ. 

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಾಯ್ಡು ದೇಶದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಯನಿರ್ಹಿಸುತ್ತಿದೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರ ಹಾಗೂ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಅಭಿವೃದ್ಧಿ ವಿಚಾರಗಳು ನಗಣ್ಯವಾಗಿವೆ ಎಂದು ವಾಕ್ ಪ್ರಹಾರ ನಡೆಸಿದ್ದಾರೆ. 

ಅಭಿವೃದ್ಧಿ ಹೆಸರು ಹೇಳಿಕೊಂಡು ಗೆಲುವು ಸಾಧಿಸಿದ ನರೇಂದ್ರ ಮೋದಿ ಜನರಿಗೆ ದೇಶದ ಜನರಿಗೆ ವಂಚಿಸಿದ್ದಾರೆ. ವಿದೇಶಗಳನ್ನು ಸುತ್ತುವುದನ್ನು ಬಿಟ್ಟು ಮತ್ತ್ಯಾವ ಕಾರ್ಯವೂ ಆಗುತ್ತಿಲ್ಲ ಎಂದಿದ್ದಾರೆ. 

ತೆಲಂಗಾಣದಲ್ಲಿ ಇದೇ ಡಿಸೆಂಬರ್ 7 ರಂದು ಚುನಾವಣೆ ನಡೆಯುತ್ತಿದ್ದು, 11 ರಂದು ಫಲಿತಾಂಶ ಪ್ರಕಟವಾಗುತ್ತಿದೆ.