ಮೇಲುಸ್ತುವಾರಿ ಸಮಿತಿ ಆದೇಶಕ್ಕೆ ಸು.ಕೋ.ನಲ್ಲಿ ತಮಿಳುನಾಡು ಆಕ್ಷೇಪ
ಮೇಲುಸ್ತುವಾರಿ ಸಮಿತಿಯ ಆದೇಶವನ್ನು ಆಕ್ಷೇಪಿಸಿ ತಮಿಳುನಾಡು ಅರ್ಜಿ
ನವದೆಹಲಿ(ಸೆ.23): ಕಾವೇರಿ ನದಿಯಿಂದ 3 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ಕಾವೇರಿ ಮೇಲುಸ್ತುವಾರಿ ಸಮಿತಿ ತರಾತುರಿಯಲ್ಲಿ ಆದೇಶ ನೀಡಿದೆ ಎಂದು ತಮಿಳು ನಾಡು ಸರ್ಕಾರ ಆಕ್ಷೇಪಿಸಿದೆ. ಅಲ್ಲದೆ, 50 ಟಿಎಂಸಿ ನೀರು ಹರಿಸಲು ಆದೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಮೇಲುಸ್ತುವಾರಿ ಸಮಿತಿಯ ಆದೇಶವನ್ನು ಆಕ್ಷೇಪಿಸಿ ಅರ್ಜಿಯನ್ನು ಸಲ್ಲಿಸಿದೆ.
ಸೆಪ್ಟೆಂಬರ್ 27ರವರೆಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಮಿತಿ ನೀಡಿರುವ ಆದೇಶಕ್ಕೆ ಆಕ್ಷೇಪಣೆ ಕೋರಿ ತಮಿಳು ನಾಡು ಸರ್ಕಾರ ಈ ಅರ್ಜಿ ಹಾಕಿದೆ. ಸಾಂಬಾ ಬೆಳೆಗೆ ಹೆಚ್ಚು ನೀರಿನ ಅಗತ್ಯವಿದೆ. 3 ಸಾವಿರ ಕ್ಯೂಸೆಕ್ ನೀರು ಸಾಕಾಗುವುದಿಲ್ಲ. ಕರ್ನಾಟಕ, ಕಾವೇರಿ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳುತ್ತಿದೆ. ಅಲ್ಲಿನ ಸರ್ಕಾರಕ್ಕೆ ನೀರು ಬಿಡಲು ಇಚ್ಛೆಯಿಲ್ಲ ಎಂದು ಅರ್ಜಿಯಲ್ಲಿ ಅದು ವಿವರಿಸಿದೆ. ತಮಿಳು ನಾಡಿನ ರೈತರನ್ನು ಕಾಪಾಡಲು ಸೆಪ್ಟೆಂಬರ್ ತಿಂಗಳ ಒಳಗೆ 17.5 ಟಿಎಂಸಿ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡುವಂತೆ ತಮಿಳು ನಾಡು ಸರ್ಕಾರ ಅರ್ಜಿಯಲ್ಲಿ ಕೋರಿದೆ.