ಸತ್ತ ವ್ಯಕ್ತಿಗೂ ಟ್ರೀಟ್ಮೆಂಟ್: ತಮಿಳುನಾಡಿನಲ್ಲೊಂದು ‘ವಿಷ್ಣುಸೇನಾ’ ಕತೆ
ಸಾಹಸಸಿಂಹ ವಿಷ್ಣುವರ್ಧನ್ ಅವರ ವಿಷ್ಣು ಸೇನಾ ಚಿತ್ರದಲ್ಲಿ ದೃಶ್ಯವೊಂದು ಬರುತ್ತದೆ. ಸರಕಾರಿ ಆಸ್ಪತ್ರೆ ವೈದ್ಯರು ಸತ್ತಿದ್ದಾನೆ ಎಂದು ಸರ್ಟಿಫಿಕೇಟ್ ನೀಡದ ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಭರಪೂರ ಚಿಕಿತ್ಸೆ ನೀಡಲಾಗುತ್ತದೆ. ನಂತರ ಅದೆ ವಿಷಯ ಇಟ್ಟುಕೊಂಡು ಚಿಕಿತ್ಸೆ ನೀಡಿದ ಆಸ್ಪತ್ರೆಯಿಂದ ಪರಿಹಾರ ಪಡೆದುಕೊಳ್ಳಲಾಗುತ್ತದೆ. ಈಗ ಅಂಥದ್ದೇ ಒಂದು ಪ್ರಕರಣ ನಡೆದಿದೆ.
ಚೆನ್ನೈ[ಸೆ.30] ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಕುಟುಂಬವೊಂದು ಖಾಸಗಿ ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದು ತಾಂಜಾವೂರಿನ ಆಸ್ಪತ್ರೆ ರೋಗಿ ಸತ್ತು ಮೂರು ದಿನವಾಗಿದ್ದರೂ ಹೆಚ್ಚುವರಿ ಹಣ ಪಡೆದುಕೊಂಡಿದೆ ಎಂದಿದೆ.
ಸಾವಿಗೀಡಾದ ಎನ್ ಶೇಖರ್[55] ಎಂಬುವರ ಪುತ್ರ ಸುಭಾಷ್ ತಾಂಜಾವೂರಿನ ಪೊಲೀಸರಿಗೆ ದೂರು ನೀಡಿದ್ದು ನಿಧನವಾದ ಮೇಲೂ ತಂದೆಯ ಪಾರ್ಥೀವ ಶರೀರವನ್ನು ಆಸ್ಪತ್ರೆ ಮೂರು ದಿನ ಇಟ್ಟುಕೊಂಡಿದೆ ಎಂದು ಆರೋಪಿಸಿದ್ದಾರೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನನ್ನ ತಂದೆಯನ್ನು ಸೆ.10 ರಂದು ಆಸ್ಪತ್ರೆಗೆ ದಾಖಲಿಸಿದ್ದೇವು. 5 ಲಕ್ಷ ರೂ. ಬಿಲ್ ಮಾಡಿರುವ ಆಸ್ಪತ್ರೆ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಮೂರು ಲಕ್ಷ ರೂ. ಬೇಕು ಎಂದು ಬೇಡಿಕೆಯಿಟ್ಟಿತು.
ಇದಾದ ಮೇಲೆ ಅನಿವಾರ್ಯವಾಗಿ ನಮ್ಮ ತಂದೆಯವರನ್ನು ತಾಂಜಾವೂರು ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಿದೆವು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ನಿಮ್ಮ ತಂದೆ ನಿಧನರಾಗಿ ಮೂರು ದಿನ ಕಳೆದಿದೆ ಎಂದು ದೃಢೀಕರಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಈ ಆರೋಪ ತಳ್ಳಿಹಾಕಿರುವ ಆಸ್ಪತ್ರೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ. ಆಸ್ಪತ್ರೆಗೆ ಕೆಟ್ಟ ಹೆಸರು ತರಲು ಹೀಗೆ ಮಾಡಲಾಗುತ್ತಿದೆ ಎಂದು ಹೇಳಿದೆ.