ಈ ಆಶ್ರಮ ಶಾಲೆಗಳಲ್ಲಿ ಕಲಿಸೋ ಶಿಕ್ಷಕರನ್ನ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಅವರಲ್ಲಿ ಗುಣಮಟ್ಟವೇ ಇಲ್ಲದ ಕಾರಣ ಗಿರಿಜನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಇವು ಸರ್ಕಾರಿ ಶಾಲೆಗಳಲ್ಲ ಶೋಷಣೆಯ ಶಾಲೆಗಳು. ಇಲ್ಲಿ ಶಿಕ್ಷಣ ದೊರಕುತ್ತಿಲ್ಲ ಬದಲಿಗೆ ಮಕ್ಕಳ ಭವಿಷ್ಯ ಹಾಳು ಮಾಡಲಾಗುತ್ತಿದೆ. ಕಮಿಷನ್ ದಂಧೆಗೆ ಮಕ್ಕಳನ್ನೇ ಬಲಿ ಕೊಡಲಾಗುತ್ತಿದೆ. ಇಂಥಾ ಸರ್ಕಾರಿ ಶಾಲೆಗಳ ಬಂಡವಾಳವನ್ನು ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ಬಯಲು ಮಾಡಿದೆ.

ಸಮಾಜಕಲ್ಯಾಣ ಇಲಾಖೆ ಗಿರಿಜನರಿಗಾಗಿ ಸ್ಥಾಪಿಸಿರುವ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣವೇ ಸಿಗುತ್ತಿಲ್ಲ. ಆಶ್ರಮ ಶಾಲೆಯಲ್ಲಿ ಓದುತ್ತಿರುವ 7ನೇ ತರಗತಿ ವಿದ್ಯಾರ್ಥಿಗಳಿಗೆ ಅಆಇಈ, ಎಬಿಸಿಡಿಯೇ ಬರುತ್ತಿಲ್ಲ. ಇದನ್ನು ನಮ್ಮ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡದ ರಿಯಾಲಿಟಿ ಚೆಕ್​ನಲ್ಲೂ ಬಯಲಾಗಿದೆ.

ಈ ಆಶ್ರಮ ಶಾಲೆಗಳಲ್ಲಿ ಕಲಿಸೋ ಶಿಕ್ಷಕರನ್ನ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಅವರಲ್ಲಿ ಗುಣಮಟ್ಟವೇ ಇಲ್ಲದ ಕಾರಣ ಗಿರಿಜನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಕೇರಳ ಮಾದರಿ ಅನುಸರಿಸಲಿ ಅನ್ನೋದು ಗಿರಿಜನ ಸಮುದಾಯದ ನಾಯಕರ ಆಗ್ರಹ.

ಬಡ ಮಕ್ಕಳ ಈ ಆಶ್ರಮ ಶಾಲೆ ಕಮಿಷನ್​ ದಂಧೆಯ ಕೂಪವಾಗಿದೆ. ಭ್ರಷ್ಟರ ತಾಣವಾಗಿದೆ. ರಾಜ್ಯದಲ್ಲಿರೋ 116 ಆಶ್ರಮಶಾಲೆಗಳಿಗೆ ವರ್ಷಕ್ಕೆ 70 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗುತ್ತಿದ್ದರೂ ಅದು ಮಕ್ಕಳ ಪಾಲಾಗದೆ ನುಂಗುಬಾಕ ಅಧಿಕಾರಿಗಳ ಜೇಬು ಸೇರುತ್ತಿರೋದು ಮಾತ್ರ ಸಚಿವ ಆಂಜನೇಯ ಅವರಿಗೆ ಕಾಣದಿರೋದು ದುರಂತವೇ ಸರಿ.

ವರದಿ: ವಿಜಯಲಕ್ಷ್ಮಿಶಿಬರೂರು, ಸುವರ್ಣ ನ್ಯೂಸ್​.