ಕೃಷಿಭಾಗ್ಯ ಯೋಜನೆಯಲ್ಲಿ ನಡೆದಿದ್ದ ಬ್ರಹ್ಮಾಂಡ ಭ್ರಷ್ಚಾಚಾರದ ನಂತರ ಕೊನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ತುಮಕೂರಿನಲ್ಲಿ ರೈತರ ಜಮೀನಿನಲ್ಲಿ ಪಾಲಿಹೌಸ್ ನಿರ್ಮಾಣದಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನು ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ಬಿಚ್ಚಿಟ್ಟಿತ್ತು. ಇದೀಗ, ತೋಟಗಾರಿಕಾ ಇಲಾಖಾ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದ್ದು, ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

ತುಮಕೂರು: ಕೃಷಿಭಾಗ್ಯ ಯೋಜನೆಯಲ್ಲಿ ನಡೆದಿದ್ದ ಬ್ರಹ್ಮಾಂಡ ಭ್ರಷ್ಚಾಚಾರದ ನಂತರ ಕೊನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ತುಮಕೂರಿನಲ್ಲಿ ರೈತರ ಜಮೀನಿನಲ್ಲಿ ಪಾಲಿಹೌಸ್ ನಿರ್ಮಾಣದಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನು ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ಬಿಚ್ಚಿಟ್ಟಿತ್ತು. ಇದೀಗ, ತೋಟಗಾರಿಕಾ ಇಲಾಖಾ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದ್ದು, ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

Add Asianetnews Kannada as a Preferred SourcegooglePreferred

ತುಮಕೂರು ಜಿಲ್ಲೆಯಲ್ಲಿ ಸರ್ಕಾರದ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಪಾಲಿಹೌಸ್ ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ನಡೆದಿದ್ದ ಭಾರೀ ಗೋಲ್'ಮಾಲನ್ನು ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು.

ಕಳೆದ ಜೂನ್ 3ರಂದು ಕೃಷಿ ‘ದೌ’ರ್ಭಾಗ್ಯ ಎಂಬ ಶೀರ್ಷಿಕೆಯಡಿ ಪ್ರಸಾರವಾಗಿದ್ದ ವರದಿ, ತುಮಕೂರಿನಲ್ಲಿ ಅಕ್ಷರಶಃ ಕಾಡ್ಗಿಚ್ಚಿನಂತೆ ಹಬ್ಬುತಿದಂತೆಯೇ ಅಧಿಕಾರಿಗಳಿಗೆ ಇದರ ಬಿಸಿ ತಟಿದೆ. ಭ್ರಷ್ಟಾಚಾರದ ಬಗ್ಗೆ ಖುದ್ದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯೇ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಒಂದು ವಾರದಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ಎಚ್ಚರಿಕೆ ನೀಡಿದ್ದಾರೆ.

ವರದಿ ಪ್ರಸಾರವಾಗಿ ಹತ್ತು ದಿನ ಕಳೆದ್ರೂ ಯಾಕೆ ನಮಗೆ ವರದಿ ಕೊಟ್ಟಿಲ್ಲ ಎಂದು ಜಿಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಕೂಡ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.

ಇನ್ನು ಅಧಿಕಾರಿಗಳ ಎದುರು ಕಕ್ಕಾಬಿಕ್ಕಿಯಾಗಿ ಸಮರ್ಪಕ ಉತ್ತರ ಕೊಡಲು ತಡವರಿಸಿ ಸಮಜಾಯಿಷಿ ನೀಡುತ್ತಿದ್ದ ತೋಟಗಾರಿಕಾ ಉಪನಿರ್ದೇಶಕಿ ಸವಿತಾರನ್ನು, ಜಿ.ಪಂ. ಸಿಇಓ ಶಾಂತಾರಾಂ ತೀವ್ರ ತರಾಟೆಗೆ ತೆಗೆದುಕೊಂಡ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ನೀಡಿದ್ದಾರೆ.

ಅವ್ಯವಹಾರದ ಕುರಿತಂತೆ ತನಿಖೆ ನಡೆಸಲು ಆದೇಶ ನೀಡಿದ್ದು ಭ್ರಷ್ಟರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಪಾಲಿಹೌಸ್‍ ಹೆಸರಲ್ಲಿ ರೈತರಿಗೆ ನಾಮ ಹಾಕಿದ್ದ ಅಧಿಕಾರಿಗಳ ಬಣ್ಣಬಯಲಾಗಿದ್ದು , ಇದು ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್.

ತುಮಕೂರಿನಿಂದ ಯೋಗೇಶ್ , ಸುವರ್ಣ ನ್ಯೂಸ್