ಸರ್ಕಾರದ ನಾನಾ ಸೌಲಭ್ಯಗಳಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ಇಂದು ನೀಡಲಿದೆ.

ನವದೆಹಲಿ (ಡಿ.15): ಸರ್ಕಾರದ ನಾನಾ ಸೌಲಭ್ಯಗಳಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ಇಂದು ನೀಡಲಿದೆ.

ಆಧಾರ್‌ ಜೋಡಣೆಯ ಗಡುವನ್ನು ಕೇಂದ್ರವು 2018ರ ಮಾರ್ಚ್‌ 31ರವರೆಗೆ ಈಗಾಗಲೇ ವಿಸ್ತರಿಸಿದೆ. ಆಧಾರ್‌ಗೆ ಸಂಬಂಧಿಸಿದ ಅರ್ಜಿಗಳ ಅಂತಿಮ ವಿಚಾರಣೆ 2018ರ ಜನವರಿ 17ರಂದು ಆರಂಭವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆಯಲು ಆಧಾರ್ ಕಡ್ಡಾಯ ನಿಯಮ ಮುಂದುವರಿಕೆಗೆ ಅವಕಾಶ ಕೊಡಬೇಕು ಎಂದು ಕೇಂದ್ರದ ಪರ ವಾದಿಸಿದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ತಿಳಿಸಿದ್ದಾರೆ. ಮೊಬೈಲ್‌ಗೆ ಆಧಾರ್‌ ಜೋಡಣೆ ಮಾಡಲು 2018 ರ ಫೆಬ್ರುವರಿ 6 ಕೊನೆಯ ದಿನ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಈ ಗಡುವು ನಿಗದಿ ಮಾಡಲಾಗಿದೆ.