ಬಿಜೆಪಿ ವಿರುದ್ಧ ತೊಡೆ ತಟ್ಟಿದ ಮಮತಾ ಬ್ಯಾನರ್ಜಿ! ದೇಶದಲ್ಲಿ ಮಹಾ ತುರ್ತು ಪರಿಸ್ಥಿತಿ ಆರೋಪ! ಟಿಎಂಸಿ ನಿಯೋಗಕ್ಕೆ ವಿಮಾನ ನಿಲ್ದಾಣದಲ್ಲೇ ತಡೆ! ಅಸ್ಸೋಂ ಸರ್ಕಾರದ ವಿರುದ್ಧ ಮಮತಾ ಗರಂ

ಕೋಲ್ಕತ್ತಾ(ಆ.2): ನಾಗರಿಕರ ರಾಷ್ಟ್ರೀಯ ನೋಂದಣಿ ವಿಷಯ ಮುಂದಿಟ್ಟುಕೊಂಡು ಬಿಜೆಪಿ ದೇಶದಲ್ಲಿ ಸೂಪರ್ ಎಮರ್ಜೆನ್ಸಿ(ಮಹಾ ತುರ್ತು ಪರಿಸ್ಥಿತಿ)ಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಟಿಎಂಸಿ ಪಕ್ಷದ ನಿಯೋಗವೊಂದು ಇಂದು ಅಸ್ಸೋಂಗೆ ಭೇಟಿ ನೀಡಿತ್ತು. ಆದರೆ ಈ ನಿಯೋಗವನ್ನು ವಿಮಾನ ನಿಲ್ದಾಣದಲ್ಲೇ ತಡೆ ಹಿಡಿಯಲಾಯಿತು. ರಾಜ್ಯ ಸರ್ಕಾರದ ಈ ನಡೆಯನ್ನು ಮಮತಾ ತೀವ್ರವಾಗಿ ಟೀಕಿಸಿದ್ದಾರೆ. 

ಅಕ್ರಮ ವಲಸಿಗರ ನೆಪದಲ್ಲಿ ಜನರಿಗೆ ತೊಂದರೆ ಕೊಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಅಸ್ಸೋಂ ಜನರ ಸಂಕಷ್ಟವನ್ನು ಅರಿಯಲೂ ನಮಗೆ ಅವಕಾಶ ಕೊಡುತ್ತಿಲ್ಲ ಎಂದು ಮಮತಾ ಹರಿಹಾಯ್ದಿದ್ದಾರೆ.

ಬಿಜೆಪಿ ಅದ್ಹೆಗೆ ಎನ್ ಆರ್ ಸಿ ಜಾರಿಗೊಳಿಸುತ್ತದೆಯೋ ನಾವೂ ನೋಡಿಯೇ ಬಿಡುವುದಾಗಿ ಮಮತಾ ಇದೇ ವೇಳೆ ಸವಾಲು ಹಾಕಿದ್ದಾರೆ. ತಮ್ಮ ಪಕ್ಷದ ನಿಯೋಗವನ್ನು ವಿಮಾನ ನಿಲ್ದಾಣದಲ್ಲೇ ತಡೆಯುವ ಮೂಲಕ ಬಿಜೆಪಿ ದೇಶದಲ್ಲಿ ಮಹಾ ತುರ್ತು ಪರಿಸ್ಥಿತಿಯನ್ನು ಹೇರಲು ಹುನ್ನಾರ ನಡೆಸಿದೆ ಎಂದು ಮಮತಾ ಆರೋಪಿಸಿದ್ದಾರೆ.