ಹಳೆಯ ಪ್ರಕರಣಕ್ಕೆ ಮರುಜೀವ : ಬಜೆಟ್ ದಿನವೇ ಕೋರ್ಟ್ಗೆ ಬರಲು ಎಚ್ಡಿಕೆಗೆ ಸಮನ್ಸ್
ಸಮ್ಮಿಶ್ರ ಸರ್ಕಾರ ಮುನ್ನಡೆಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನ್ಯಾಯಾಲಯದಿಂದ ಕಂಟಕವೊಂದು ಎದುರಾಗಿದೆ.
ಬೆಂಗಳೂರು : ಸಮ್ಮಿಶ್ರ ಸರ್ಕಾರ ಮುನ್ನಡೆಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನ್ಯಾಯಾಲಯದಿಂದ ಕಂಟಕವೊಂದು ಎದುರಾಗಿದ್ದು, ಡಿನೋಟಿಫಿಕೇಷನ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಬರುವ ಜು.5ಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ.
ಆದರೆ, ಜು.5ರಂದೇ ಬಜೆಟ್ ಮಂಡನೆ ಮಾಡಬೇಕಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಸಲ್ಲಿಕೆ ಮಾಡಿರುವ ಆರೋಪಪಟ್ಟಿಸಂಬಂಧ ಹೇಳಿಕೆ ದಾಖಲಿಸುವ ಬೇಕಿರುವ ಕಾರಣ ಖುದ್ದು ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ಏನಿದು ಪ್ರಕರಣ?: ನಗರದ ಥಣಿಸಂದ್ರದ 3.24 ಎಕರೆ ಭೂಮಿ ಡಿನೋಟಿಫಿಕೇಷನ್ಗೆ ಸಂಬಂಧಿಸಿದ ಹಳೆಯ ಪ್ರಕರಣಕ್ಕೆ ಇದೀಗ ಮರುಜೀವ ಬಂದಿದೆ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಶ್ರೀರಾಮ್ ಮತ್ತು ರವಿಪ್ರಕಾಶ್ ಎಂಬುವರಿಗೆ ಡಿನೋಟಿಫಿಕೇಷನ್ ಮಾಡಿಕೊಟ್ಟಿದ್ದರು ಎಂಬ ಆರೋಪ ಇದೆ. ಈ ಭೂಮಿಯನ್ನು ಬಿಡಿಎ ಸ್ವಾಧೀನ ಪಡೆದುಕೊಂಡು ಪರಿಹಾರ ನೀಡಲಾಗಿತ್ತು. ಅಲ್ಲದೇ, ನಿವೇಶನಗಳನ್ನು ಸಹ ಹಂಚಿಕೆ ಮಾಡಲಾಗಿತ್ತು. ಆದರೂ ಆಗ ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಮನವಿ ಮಾಡಿದ ಕಾರಣಕ್ಕಾಗಿ ಕುಮಾರಸ್ವಾಮಿ ಡಿನೋಟಿಫಿಕೇಷನ್ ಮಾಡಿದ್ದರು.
ಡಿನೋಟಿಫಿಕೇಷನ್ ಸಂಬಂಧ 2012ರಲ್ಲಿ ಮಹದೇವಸ್ವಾಮಿ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ಪ್ರಕರಣ ರದ್ದು ಮಾಡುವಂತೆ ಕುಮಾರಸ್ವಾಮಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಪ್ರಕರಣವನ್ನು ರದ್ದು ಮಾಡಲು ನಿರಾಕರಿಸಿ ತನಿಖೆ ನಡೆಸಲು ನಿರ್ದೇಶನ ನೀಡಿತು. ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿಸಲ್ಲಿಕೆ ಮಾಡಿದ್ದರು. ಆರೋಪಪಟ್ಟಿಸಂಬಂಧ ನೋಟಿಸ್ ಜಾರಿ ಮಾಡಿದರೂ ಕುಮಾರಸ್ವಾಮಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ವಿಶೇಷ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ.