ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ: ಸುಬ್ರಮಣಿಯನ್ ಸ್ವಾಮಿ
ನವದೆಹಲಿ(ಅ.07): ಮುಖ್ಯಮಂತ್ರಿ ಜಯಲಲಿತಾ ದೀರ್ಘಕಾಲದಿಂದ ಆಸ್ಪತ್ರೆ ಸೇರಿರುವ ಹಿನ್ನೆಲೆಯಲ್ಲಿ ತಮಿಳುನಾಡುವಿನಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತಂತೆ ಗೃಹ ಸಚಿವ ರಾಜ್'ನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಸ್ವಾಮಿ, ತಮಿಳುನಾಡಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ತಿರುನಲ್ವೇಲಿ, ರಾಮನಾಥಪುರಂ, ಮಧುರೈ ಮತ್ತು ಕನ್ಯಾಕುಮಾರಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಐಎಸ್'ನ ಸ್ಲೀಪರ್ ಸೆಲ್'ಗಳು ಕಾರ್ಯಪ್ರೌವೃತ್ತರಾಗಿದ್ದು, ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹವಣಿಸುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ.
ತಮಿಳುನಾಡಿನಲ್ಲಿ ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಆರು ತಿಂಗಳ ಮಟ್ಟಿಗೆ ಚನ್ನೈನ ದಕ್ಷಿಣ ಜಿಲ್ಲೆಗಳಲ್ಲಿ ಆಸ್ಫಾ ಕಾಯ್ದೆ ಜಾರಿಗೊಳಿಸುವುದು ಉತ್ತಮ ಎಂಬ ಸಲಹೆಯನ್ನು ಸ್ವಾಮಿ ಗೃಹಸಚಿವರಿಗೆ ನೀಡಿದ್ದಾರೆ.
ಹೀಗಾಗಿ ಸಂವಿಧಾನದ 356ನೇ ವಿಧಿಯ ಪ್ರಕಾರ ತಮಿಳುನಾಡು ವಿಧಾನಸಭೆಯನ್ನು ತಾತ್ಕಾಲಿಕ ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.