ನೇತ್ರಾವತಿ ನದಿಯಲ್ಲಿ ತಪ್ಪಿತು ಭಾರೀ ಅನಾಹುತ
ಎಎಂಆರ್ ಡ್ಯಾಂನಿಂದ ಏಕಾಏಕಿ ನೀರನ್ನು ಹೊರಬಿಡಲಾಗಿದ್ದು, ನದಿಯಲ್ಲಿ ನೀರಿನ ಮಟ್ಟಹೆಚ್ಚಾಗಿತ್ತು. ಈ ವೇಳೆ ನದಿಯಲ್ಲಿ ಆಟವಾಡಲು ತೆರಳಿದ್ದ ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಆಟವಾಡಲು ತೆರಳಿದ್ದ ವೇಳೆ ಮೇಲ್ಭಾಗದ ಎಎಂಆರ್ ಅಣೆಕಟ್ಟಿನಿಂದ ನೀರು ಬಿಟ್ಟ ಪರಿಣಾಮ ಈಜಲು ಸಾಧ್ಯವಾಗದೇ ನದಿ ಮಧ್ಯಭಾಗದಲ್ಲಿದ್ದ ಬಂಡೆಕಲ್ಲಿನ ಮೇಲೆ ಆಶ್ರಯ ಪಡೆದಿದ್ದ ಐವರು ಕಾಲೇಜು ವಿದ್ಯಾರ್ಥಿಗಳನ್ನು ಸ್ಥಳೀಯ ಯುವಕರು ರಕ್ಷಿಸಿದ ಘಟನೆ ಬಂಟ್ವಾಳ ತಾಲೂಕಿನ ನಾವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ವಾಲ್ಮೀಕಿ ಜಯಂತಿ ಪ್ರಯುಕ್ತ ಶಾಲೆಗೆ ರಜೆಯಿದ್ದ ಕಾರಣ ನಾವೂರು ಗ್ರಾಮದ ಶ್ರೀ ಲಕ್ಷ್ಮೇ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ನೇತ್ರಾವತಿ ನದಿಗೆ 11 ಮಂದಿ ವಿದ್ಯಾರ್ಥಿಗಳ ತಂಡ ಆಟವಾಡಲು ತೆರಳಿತ್ತು.
ಈ ವೇಳೆ ಸಮೀಪದ ಶಂಭೂರು ಎಎಂಆರ್ ಡ್ಯಾಂನಿಂದ ಏಕಾಏಕಿ ನೀರನ್ನು ಹೊರಬಿಡಲಾಗಿದ್ದು, ನದಿಯಲ್ಲಿ ನೀರಿನ ಮಟ್ಟಹೆಚ್ಚಾಗಿದೆ. ತಕ್ಷಣ 6 ವಿದ್ಯಾರ್ಥಿಗಳು ಈಜಿ ದಡ ಸೇರಿದರೆ, ಉಳಿದ ಐವರು ಈಜಲು ಸಾಧ್ಯವಾಗದೇ ನದಿಯ ಇನ್ನೊಂದು ಬದಿಯಲ್ಲಿದ್ದ ದೊಡ್ಡ ಬಂಡೆಕಲ್ಲಿನ ಮೇಲೆ ಹತ್ತಿ ಕುಳಿತಿದ್ದಾರೆ. ಈ ರಕ್ಷಣೆ ಕೂಗಿಕೊಂಡಿದ್ದು, ಸ್ಥಳೀಯ ಯುವಕರನ್ನು ರಕ್ಷಿಸಿದ್ದಾರೆ.
ನದಿಗೆ ನೀರು ಬಿಡುವಾಗ ಮುಂಜಾಗ್ರತಾ ಕ್ರಮವಾಗಿ ಸೈರನ್ ಬಾರಿಸಿದ್ದೇವೆ ಎಂದು ಡ್ಯಾಂನ ಅಧಿಕಾರಿಗಳು ಹೇಳಿದ್ದಾರೆ.