ಸರ್ಕಾರದ ಆದೇಶಕ್ಕೆ ಸಡ್ಡು ಹೊಡೆದ ರೋಹಿಣಿ ಸಿಂಧೂರಿ; ಮತ್ತೆ ಸರ್ಕಾರಕ್ಕೆ ಮುಖಭಂಗ
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಿನ್ನೆ ಆದೇಶ ನೀಡಲಾಗಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಿಎಟಿ ಮೊರೆ ಹೋಗಿದ್ದರು. ಇದೀಗ ಸಿಎಟಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಬೆಂಗಳೂರು (ಮಾ.08): ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಿನ್ನೆ ಆದೇಶ ನೀಡಲಾಗಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಿಎಟಿ ಮೊರೆ ಹೋಗಿದ್ದರು. ಇದೀಗ ಸಿಎಟಿ ( ಕೇಂದ್ರ ಆಡಳಿತ ನ್ಯಾಯಮಂಡಳಿ) ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಮಾರ್ಚ್ 13 ರವರೆಗೆ ಡಿಸಿ ವರ್ಗಾವಣೆಗೆ ತಡೆ ನೀಡಿದೆ. ಇದರಿಂದಾಗಿ ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ. 13 ಕ್ಕೆ ಮತ್ತೆ ವಿಚಾರಣೆ ನಿಗದಿಯಾಗಿದೆ. ಅಲ್ಲಿಯವರೆಗೂ ಹಾಸನ ಡಿಸಿಯಾಗಿ ರೋಹಿಣಿ ಸಿಂಧೂರಿ ಮುಂದುವರೆಯಲಿದ್ದಾರೆ.
ರಾಜ್ಯಾದ್ಯಂತ ಮತದಾರರ ಪಟ್ಟಿ ಅಂತಿಮಗೊಳಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಗ್ರೀನ್ ಸಿಗ್ನಲ್ ನೀಡಿದೆ. 12 ಐಎಎಸ್ ಅಧಿಕಾರಿಗಳ ಜೊತೆ ರೋಹಿಣಿ ಸಿಂಧೂರಿಯನ್ನು ವರ್ಗಾವಣೆಗೊಳಿಸಿ ಉದ್ಯೋಗ ಮತ್ತು ತರಬೇತಿ ಕೇಂದ್ರದ ಆಯುಕ್ತ ಹುದ್ದೆ ನೀಡಲಾಗಿತ್ತು.
ತಿಂಗಳಿನ ಹಿಂದೆಯೇ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸರ್ಕಾರ ಆದೇಶಿಸಿತ್ತು. ಚುನಾವಣೆ ಆಯೋಗ ಆಕ್ಷೇಪ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಾಗಿಯೇ ಮುಂದುವರೆದಿದ್ದರು.ಇದೀಗ ಮತ್ತೆ ವರ್ಗಾವಣೆಗೆ ತಡೆಯಾಜ್ಞೆ ಬಿದ್ದಿದೆ.