ರಾಜ್ಯದ ಮೊದಲ ಸ್ಟಾರ್ಟ್ ಅಪ್ ಕೇಂದ್ರ ಮಂಗಳೂರಿನಲ್ಲಿ
ಹೊಸದಾಗಿ ಉದ್ದಿಮೆ ಸ್ಥಾಪಿಸುವವರಿಗೆ ನೆರವಾಗಲು ಕೇಂದ್ರ ಸರ್ಕಾರವು ಮಂಗಳೂರಿನಲ್ಲಿ ಸ್ಥಾಪಿಸಲುದ್ದೇಶಿಸಿರುವ ಕರ್ನಾಟಕದ ಮೊದಲ ಸ್ಟಾರ್ಟ್ ಅಪ್ ಇನ್ಕ್ಯೂಬೇಶನ್ ಕೇಂದ್ರ ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
ಮಂಗಳೂರು (ಜು. 10): ಹೊಸದಾಗಿ ಉದ್ದಿಮೆ ಸ್ಥಾಪಿಸುವವರಿಗೆ ನೆರವಾಗಲು ಕೇಂದ್ರ ಸರ್ಕಾರವು ಮಂಗಳೂರಿನಲ್ಲಿ ಸ್ಥಾಪಿಸಲುದ್ದೇಶಿಸಿರುವ ಕರ್ನಾಟಕದ ಮೊದಲ ಸ್ಟಾರ್ಟ್ ಅಪ್ ಇನ್ಕ್ಯೂಬೇಶನ್ ಕೇಂದ್ರ ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೊಜನೆಯಲ್ಲಿ ಈ ಕೇಂದ್ರ ಕಾರ್ಯಾರಂಭಿಸಲಿದೆ. ಈ ಇನ್ಕ್ಯೂಬೇಶನ್ ಕೇಂದ್ರದಲ್ಲಿ ಆಧುನಿಕ ಸಂಶೋಧನಾ ಕೇಂದ್ರ, ಲ್ಯಾಬ್’ಗಳು ಸೇರಿ ಮೂಲ ಉದ್ದಿಮೆ ಆರಂಭಿಸಲು ಬೇಕಾದ ಪ್ರಾಥಮಿಕ ಸೌಲಭ್ಯಗಳು ದೊರಕಲಿವೆ.
ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ ವೇಳೆ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತರಾಮನ್ ಆವರು ಇನ್ಕ್ಯುಬೇಶನ್ ಕೇಂದ್ರವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಬಗ್ಗೆ ಹೇಳಿಕೆ ನೀಡಿದ್ದರು.
ಅಲ್ಲದೇ ದೇಶದ ಮೊದಲ ಸ್ಟಾರ್ಟ್ ಅಪ್ ಜಿಲ್ಲೆಯನ್ನಾಗಿ ಮಂಗಳೂರನ್ನು ಮಾರ್ಪಡಿಸುವುದು, ನಂತರ ಅದನ್ನು ಉಡುಪಿ ಹಾಗೂ ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಗೆ ವಿಸ್ತರಿಸುವ ಬಗ್ಗೆ ಸಚಿವೆ ನಿರ್ಮಲಾ ಸೀತರಾಮನ್ ಮಾಹಿತಿ ನೀಡಿದ್ದರು.
ಈ ಕೇಂದ್ರದಲ್ಲಿ ಸುಮಾರು 100 ಉದ್ದಿಮೆಗಳಿಗೆ ಅವಕಾಶ ಕಲ್ಪಿಸುವುದು, ಎರಡು ಅವಿಷ್ಕಾರ ಕೇಂದ್ರಗಳ ಸ್ಥಾಪನೆ, ಕಾಲೇಜುಗಳಲ್ಲಿ 5 ಇನ್ಕ್ಯುಬೇಶನ್ ಕೇಂದ್ರ ಮತ್ತು 20 ರಿಂದ 30 ಶಾಲೆಗಳಲ್ಲಿ ಟಿಂಕರಿಂಗ್ ಲ್ಯಾಬ್’ಗಳನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ.
ಇದಕ್ಕೆ ಪೂರಕವಾಗಿ ಅಟಲ್ ಅವಿಷ್ಕಾರ ಮಿಷನ್ ಹಾಗೂ ಅಟಲ್ ಟಿಂಕರಿಂಗ್ ಲ್ಯಾಬೊರೇಟರಿಗಳನ್ನು ಶಾಲೆಗಳಲ್ಲಿ ತೆರೆಯಲಾಗುತ್ತಿದೆ. ನೀತಿ ಆಯೋಗದಡಿ ವಿವಿಧ ಶಾಲೆಗಳಲ್ಲಿ ಈಗಾಗಲೇ ಇವುಗಳಿಗೆ ಅರ್ಜಿ ಸಲ್ಲಿಸಿವೆ. ಎನ್’ಐಟಿಕೆ ಸುರತ್ಕಲ್ ಮತ್ತು ನಿಟ್ಟೆಯ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಅವಿಷ್ಕಾರ ಕೇಂದ್ರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ.