ಬಲವಂತದ ಸಾಲ ವಸೂಲಿ : ಪೊಲೀಸರು ಸ್ವಯಂಪ್ರೇರಿತ ಕೇಸ್ ಹಾಕಂಗಿಲ್ಲ!
ಸಾಲ ವಸೂಲು ಮಾಡಲು ದುರ್ಬಲ ವರ್ಗದವರ ಮೇಲೆ ದೌರ್ಜನ್ಯ ನಡೆಸುವ ಲೇವಾದೇವಿದಾರರು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವ ನಿರ್ಧಾರವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಹಿಂಪಡೆದಿದ್ದಾರೆ.
ಬೆಂಗಳೂರು (ಅ. 14): ಸಾಲ ವಸೂಲು ಮಾಡಲು ದುರ್ಬಲ ವರ್ಗದವರ ಮೇಲೆ ದೌರ್ಜನ್ಯ ನಡೆಸುವ ಲೇವಾದೇವಿದಾರರು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವ ನಿರ್ಧಾರವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಹಿಂಪಡೆದಿದ್ದಾರೆ.
ಈ ಸಂಬಂಧ ಸೆ.3ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಸ್ವಯಂಪ್ರೇರಿತ ಅಂಶವನ್ನು ಹಿಂಪಡೆದಿರುವ ಡಿಜಿಪಿ, ಸಹಕಾರ ಇಲಾಖೆ ಅಧಿಕಾರಿಗಳು ದೂರು ಸಲ್ಲಿಸಿದರೆ ಮಾತ್ರ ಪ್ರಕರಣ ದಾಖಲಿಸುವಂತೆ ಸೂಚಿಸಿ ಮತ್ತೊಂದು ಸುತ್ತೋಲೆ ಜಾರಿಗೊಳಿಸಿದ್ದಾರೆ.
ಅಧಿಕ ಪ್ರಮಾಣದ ಬಡ್ಡಿ ವಸೂಲಿ ಹಾಗೂ ಸಾಲ ಮರು ಪಾವತಿಗಾಗಿ ಸಾರ್ವಜನಿಕರು ಹಾಗೂ ರೈತರನ್ನು ಶೋಷಣೆ ಮಾಡುವ ಸಂಬಂಧ ಸಹಕಾರ ಇಲಾಖೆಯ ನಿಬಂಧಕರ ಅಥವಾ ಉಪ ನಿಬಂಧಕರಿಂದ ದೂರುಗಳು ಬಂದಲ್ಲಿ ಪ್ರಕರಣ ದಾಖಲಿಸಬೇಕು. ಈ ವಿಚಾರದಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬಾರದು ಎಂದು ಡಿಜಿಪಿ ಸ್ಪಷ್ಟಪಡಿಸಿದ್ದಾರೆ.
ಸಾಲ ವಸೂಲಿಗೆ ದುರ್ಬಲ ವರ್ಗದ ಮೇಲೆ ಲೇವಾದೇವಿ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ನಡೆಸುವ ದೌರ್ಜನ್ಯ ನಿಯಂತ್ರಣಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಲು ರಾಜ್ಯ ಪೊಲೀಸ್ ಇಲಾಖೆ ಈ ಹಿಂದೆ ನಿರ್ಧರಿಸಿತ್ತು.