ಎಸ್ ಎಸ್ ಎಲ್ ಸಿಯಲ್ಲಿ ಚಿಂದಿ ಆಯುತ್ತಿದ್ದ ಬಾಲಕನ ಸಾಧನೆ
ಒಂದು ಕಾಲದಲ್ಲಿ ಚಿಂದಿ ಆಯುತ್ತಿದ್ದ ಹುಡುಗನೊಬ್ಬ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಬೆಂಗಳೂರು: ಒಂದು ಕಾಲದಲ್ಲಿ ಚಿಂದಿ ಆಯುತ್ತಿದ್ದ ಹುಡುಗನೊಬ್ಬ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಮೂಲತಃ ಯಾದಗಿರಿ ಜಿಲ್ಲೆಯ ರಾಮಸಮುದ್ರನಾಗಿರುವ ಮನ್ಸು ಎಂಬ ವಿದ್ಯಾರ್ಥಿ ಶೇ.78 ಅಂಕ ಪಡೆದಿದ್ದಾನೆ. ಶಿವಾಜಿನಗರದ ಬಿಬಿಎಂಪಿ ಸರ್ಕಾರಿ ಶಾಲೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಅಂಕ ಪಡೆಯುವ ಮೂಲಕ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಕೂಡ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.
ಯಾದಗಿರಿಯಿಂದ ಪೋಷಕರೊಂದಿಗೆ ವಲಸೆ ಬಂದ ಮನ್ಸು 2013 ರ ಸುಮಾರಿಗೆ ಚಿಂದಿ ಆಯುತ್ತಿದ್ದ. ಈ ಕೆಲಸದಲ್ಲಿ ನೋಡಿದ ಅವನನ್ನು ‘ಸ್ಪರ್ಶ ಟ್ರಸ್ಟ್’ ನೇರವಾಗಿ ಆರನೇ ತರಗತಿಗೆ ಸೇರಿಸುವ ಮೂಲಕ ಶಿಕ್ಷಣ ಕೊಡಿಸಿತು. ನಂತರ ಆಸಕ್ತಿಯಿಂದ ಓದಿದ ಮನ್ಸು, ಇಂದು ಉತ್ತಮ ಅಂಕ ಪಡೆದಿದ್ದಾನೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಟ್ರಸ್ಟ್ನ ಗೋಪಿನಾಥ್.
ಉತ್ತಮ ಅಂಕ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮನ್ಸು, ಲೆಕ್ಕ ಪರಿಶೋಧಕನಾಗುವ ಹಂಬಲ ಹೊಂದಿದ್ದೇನೆ. ಹೆಚ್ಚು ಅಂಕ ಪಡೆದು ವಾಣಿಜ್ಯ ವಿಭಾಗದಲ್ಲಿ ಶಿಕ್ಷಣ ಮುಂದುವರಿಸಲಿದ್ದೇನೆ. ಸ್ಪರ್ಶ ಸಂಸ್ಥೆಯು ಶಿಕ್ಷಣ ನೀಡಿಸಿದ್ದಕ್ಕೆ ಕೃತಜ್ಞತೆ ಅರ್ಪಿಸಿದ್ದಾನೆ