ವಿಜಯದಶಮಿ ದಿನದಂದೇ ಮೈಸೂರು ರಾಜಮನೆತನದಲ್ಲಿ 2ನೇ ಸಾವು
ರಾಜಮಾತೆ ಪ್ರಮೋದಾದೇವಿ ಅವರ ತಾಯಿ ನಿಧನರಾದ ಬೆನ್ನಲ್ಲಿಯೇ ಮೈಸೂರು ರಾಜಮನೆತನದಲ್ಲಿ ಮತ್ತೊಂದು ಸಾವಾಗಿದೆ.
ಬೆಂಗಳೂರು, [ಅ.19]: ಇಂದು ವಿಜಯದಶಮಿ ದಿನದಂದೇ ಮೈಸೂರು ರಾಜಮನೆತನದಲ್ಲಿ ಎರಡನೇ ಸಾವಾಗಿದೆ.
ಇಂದು (ಶುಕ್ರವಾರ )ವಿಜಯ ದಶಮಿಯಂದೇ ರಾಜಮಾತೆ ಪ್ರಮೋದಾದೇವಿ ಅವರ ತಾಯಿ ಪುಟ್ಟಚಿನ್ನಮ್ಮಣ್ಣಿ ನಿಧನರಾಗಿದ್ದು, ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಹೀಗಾಗಿ ಅರಮನೆಯಲ್ಲಿ ನಡೆಯಬೇಕಿದ್ದ ಪೂಜಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಈ ದುಃಖ ಮಾಸುವ ಮುನ್ನವೇ ಒಡೆಯರ್ ಕುಟುಂಬದಲ್ಲಿ ಮತ್ತೊಂದು ಸಾವು ಸಂಭವಿಸಿದೆ.
ರಾಜಮಾತೆ ಪ್ರಮೋದ ದೇವಿಗೆ ಮಾತೃವಿಯೋಗ
ಇದರ ಬೆನ್ನಲ್ಲಿಯೇ ಇದೀಗ ಶ್ರೀ ಕಂಠದತ್ತ ನರಸಿಂಹ ರಾಜ ಒಡೆಯರ್ ಸಹೋದರಿ, ರಾಜಮಾತೆ ಪ್ರಮೋದಾ ದೇವಿ ಅವರಿಗೆ ನಾದಿನಿ ಆಗಿರುವ ವಿಶಾಲಾಕ್ಷಿ ದೇವಿ ಇಂದು ಸಂಜೆ ಸಾವನ್ನಪ್ಪಿದ್ದಾರೆ.
ವಿಶಾಲಾಕ್ಷಿ ದೇವಿ ಅವರಿಗೆ 58 ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ವಿಶಾಲಾಕ್ಷಿ ದೇವಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಸಂಜೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಮೃತ ದೇಹ ವಿಕ್ರಮ್ ಆಸ್ಪತ್ರೆಯಿಂದ ಬೆಂಗಳೂರು ಅರಮನೆ ಮೈದಾನಕ್ಕೆ ರವಾನೆ ಆಗಲಿದ್ದು, ಗೇಟ್ ನಂಬರ್ 6ರಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಳೆ [ಶನಿವಾರ] ಮೈಸೂರಿಗೆ ಕೊಂಡೊಯ್ಯಲಾಗುತ್ತದೆ ಎಂದು ತಿಳಿದುಬಂದಿದೆ.