ಇದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೋನಲೆಯ ಸರಕಾರಿ ಪ್ರೌಢಶಾಲೆ. ಮೂವತ್ತು ವರ್ಷಗಳ ಹಿಂದೆ ಪ್ರಾರಂಭವಾದ ಶಾಲೆಯಲ್ಲಿ ಕನಿಷ್ಟ ಮೂಲ ಸೌಲಭ್ಯಗಳೂ ಇರಲಿಲ್ಲ. ಆದರೆ ಶಾಲೆಗೆ ಸುಮಾರು ಹತ್ತು ಎಕರೆಗಳಷ್ಟು ವಿಶಾಲವಾದ ಜಾಗವಿತ್ತು. ಇದನ್ನೇ ಸಂಪನ್ಮೂಲವಾಗಿ ಬಳಸಿಕೊಂಡ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ವಿದ್ಯಾರ್ಥಿಗಳ ನೆರವಿನಿಂದ ಇಂದು ಸುಂದರವಾದ ತೋಟ ನಿರ್ಮಾಣ ಮಾಡಿದ್ದಾರೆ. ಶಾಲೆಯನ್ನು ರಾಷ್ಟ್ರ ಮಟ್ಟದಲ್ಲಿ ಮಾದರಿಯಾಗಿ ರೂಪಿಸಿದ್ದಾರೆ.

ಬೆಂಗಳೂರು (ಮಾ.26): ಇದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೋನಲೆಯ ಸರಕಾರಿ ಪ್ರೌಢಶಾಲೆ. ಮೂವತ್ತು ವರ್ಷಗಳ ಹಿಂದೆ ಪ್ರಾರಂಭವಾದ ಶಾಲೆಯಲ್ಲಿ ಕನಿಷ್ಟ ಮೂಲ ಸೌಲಭ್ಯಗಳೂ ಇರಲಿಲ್ಲ. ಆದರೆ ಶಾಲೆಗೆ
ಸುಮಾರು ಹತ್ತು ಎಕರೆಗಳಷ್ಟು ವಿಶಾಲವಾದ ಜಾಗವಿತ್ತು. ಇದನ್ನೇ ಸಂಪನ್ಮೂಲವಾಗಿ ಬಳಸಿಕೊಂಡ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ವಿದ್ಯಾರ್ಥಿಗಳ ನೆರವಿನಿಂದ ಇಂದು ಸುಂದರವಾದ ತೋಟ ನಿರ್ಮಾಣ ಮಾಡಿದ್ದಾರೆ. ಶಾಲೆಯನ್ನು ರಾಷ್ಟ್ರ ಮಟ್ಟದಲ್ಲಿ ಮಾದರಿಯಾಗಿ ರೂಪಿಸಿದ್ದಾರೆ.

Add Asianetnews Kannada as a Preferred SourcegooglePreferred

ನಿರ್ವಹಣಾ ತಂಡವಿದೆ:

ಶಾಲೆಯ ಜಾಗದಲ್ಲಿ ಬೆಳೆದಿರುವ ತೆಂಗಿನ ತೋಟ, ಹೂದೋಟ, ಗಿಡಮೂಲಿಕಾ ಸಸ್ಯಗಳನ್ನು ನೋಡಿಕೊಳ್ಳಲು ಶಿಕ್ಷಕರ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡವನ್ನು ರಚಿಸಲಾಗಿದೆ. ಪ್ರತಿ ತಂಡವೂ ತೋಟವನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಾ ಬಂದಿದೆ. ಜೊತೆಗೆ ವಿಶೇಷ ಎಂದರೆ ತೋಟವನ್ನು ನೋಡಿಕೊಳ್ಳುತ್ತಲೇ ಪಾಠ ಮಾಡುವುದು. ಉದಾಹರಣೆಗೆ ತೋಟದಲ್ಲಿರುವ ಸಸ್ಯಗಳನ್ನು ಬಳಸಿಕೊಂಡು ವಿಜ್ಞಾನ ಪಾಠ ಮಾಡುವುದು. ಇದರಿಂದಲೇ ಶಾಲೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ ಮುಖ್ಯ ಶಿಕ್ಷಕರು.

ಶಿಕ್ಷಣಕ್ಕೆ ಒತ್ತು: 2002 ರಿಂದಲೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತ 8 ವರ್ಷಗಳ ಕಾಲ 100 ಕ್ಕೆ 100 ರಷ್ಟು ಫಲಿತಾಂಶ ದಾಖಲಾದ ಶಾಲೆ ಎಂಬ ಹೆಗ್ಗಳಿಕೆಯೂ ಈ ಶಾಲೆಗಿದೆ. ತರಗತಿಯ ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಬೆಳಿಗ್ಗೆ ಸಂಜೆ ವಿಶೇಷ ತರಗತಿಗಳ ನಿರ್ವಹಣೆ ಅವ್ಯಾಹತವಾಗಿ ನಡೆದು ಬಂದಿದೆ. ಮನೆಯಲ್ಲಿ ನಿಗದಿತವಾಗಿ ಓದುವ ವೇಳಾಪಟ್ಟಿಯನ್ನು ರಚಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಹಂಚಲಾಗಿದೆ. ತೋಟದಿಂದ ಬಂದ ಆದಾಯದಲ್ಲಿ ಮಕ್ಕಳಿಗೆ ಓದಿಗೆ ಪೂರಕವಾಗಲೆಂದು ಸೋಲಾರ್ ದೀಪ ಪೂರೈಸುವುದು ಸೇರಿದಂತೆ ವಿದ್ಯಾರ್ಥಿಗಳ ಹಿತಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯನಿರ್ವಹಿಸುತ್ತಾ ಬಂದಿದೆ ಈ ಶಾಲೆ.