ಸಂಸತ್ ಕಲಾಪದ ವೇಳೆ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿದ್ದರ ಬಗ್ಗೆ ಇದೀಗ ವಿಚಾರವೊಂದನ್ನು ಬಹಿರಂಗ ಮಾಡಿದ್ದಾರೆ. ತಮ್ಮ ಪಕ್ಷದ ಕೆಲವರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ಅವರು ಹೇಳಿದ್ದಾರೆ. 

ನವದೆಹಲಿ: ಇತ್ತೀಚೆಗೆ ಸಂಸತ್‌ ಕಲಾಪದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿದ್ದಕ್ಕೆ ಸ್ವಪಕ್ಷೀಯ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಹಿರಂಗಪಡಿಸಿದ್ದಾರೆ. ಈ ಮೂಲಕ ತಮ್ಮ ನಡೆಗೆ ಎನ್‌ಡಿಎ ಸದಸ್ಯರು ಮಾತ್ರವಲ್ಲ, ತಮ್ಮದೇ ಪಕ್ಷದ ನಾಯಕರೇ ಕಿಡಿಕಾರಿದ್ದರು ಎಂದು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. 

Add Asianetnews Kannada as a Preferred SourcegooglePreferred

ನಾಲ್ಕು ದಿನಗಳ ವಿದೇಶ ಯಾತ್ರೆಯ ಮೊದಲ ಭಾಗವಾಗಿ ಬುಧವಾರ ಜರ್ಮನಿಗೆ ಆಗಮಿಸಿದ ರಾಹುಲ್‌ ಗಾಂಧಿ, ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಈ ವಿಷಯ ತಿಳಿಸಿದರು. ಇದೇ ವೇಳೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ, ‘ದೇಶದಲ್ಲಿ ಉದ್ಯೋಗ ಸೃಷ್ಟಿಒಂದು ದೊಡ್ಡ ಸಮಸ್ಯೆಯಾಗಿದೆ. 

ಆದರೆ, ಈ ಬಗ್ಗೆ ಪ್ರಧಾನಿ ಮೋದಿ ಅವರು ಗಮನ ಹರಿಸುತ್ತಿಲ್ಲ. ಯಾವುದೇ ಸಮಸ್ಯೆ ನಿವಾರಣೆಗಾಗಿ ಮೊದಲು ಆ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳಬೇಕು,’ ಎಂದರು. ಇದೇ ವೇಳೆ ತಮ್ಮ ತಂದೆ ರಾಜೀವ್‌ ಗಾಂಧಿ ಹತ್ಯೆ ಬಗ್ಗೆಯೂ ಮಾತನಾಡಿದ ಅವರು, ‘ನನ್ನ ತಂದೆಯ ಹತ್ಯೆಕೋರನಾದ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್‌ ಶ್ರೀಲಂಕಾದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಾಗಲೂ ಅದನ್ನು ನಾನು ಸಹಿಸಿರಲಿಲ್ಲ,’ ಎಂದು ಹೇಳುವ ಮೂಲಕ ತಾನೋರ್ವ ಶಾಂತಿಯ ಪ್ರತಿಪಾದಕ ಎಂಬುದಾಗಿ ಬಿಂಬಿಸಿಕೊಂಡರು.