ಸಿದ್ದಗಂಗಾ ಶ್ರೀಗಳ ಪಾದ ಮುಟ್ಟಲು ಹಿಂದೇಟು ಹಾಕುತ್ತಿದ್ದವರು ಈಗ ತಡಕಾಡುತ್ತಿದ್ದಾರೆ
ಈ ಡೋಂಗಿಗಳು ಹಿಂದೂಗಳ ಕಾಲು ಹಿಡಿಯಲು ಹೋರಾಟಿದ್ದಾರೆ. ಯಾವ ದೇವಸ್ಥಾನವನ್ನೂ ಬಿಡುತ್ತಿಲ್ಲ
ತುಮಕೂರು(ಜ.30): ಒಂದಾನೊಂದು ಕಾಲದಲ್ಲಿ ಸಿದ್ದಗಂಗಾ ಶ್ರೀಗಳ ಪಾದ ಮುಟ್ಟಲೂ ಹಿಂದೇಟು ಹಾಕುತಿದ್ದವರು ಈಗ ಶ್ರೀಗಳ ಪಾದ ಎಲ್ಲಿದೆ ಎಂದು ತಡಕಾಡುತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಸೊಗಡು ಶಿವಣ್ಣ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯಗೆ ಈಗ ಹಿಂದೂಗಳ ಶಕ್ತಿ ಗೊತ್ತಾಗಿದೆ. ಹಾಗಾಗಿ ಈ ಡೋಂಗಿಗಳು ಹಿಂದೂಗಳ ಕಾಲು ಹಿಡಿಯಲು ಹೋರಾಟಿದ್ದಾರೆ. ಯಾವ ದೇವಸ್ಥಾನವನ್ನೂ ಬಿಡುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ. ಸಿದ್ದಗಂಗಾ ಶ್ರೀಗಳ ಶಕ್ತಿ ಹೇಗೆ ಇವರಿಗೆ ತಿಳಿದಿದೆಯೋ ಹಾಗೆನೆ ಬಿಜೆಪಿ ಹಿಂದೂಪರ ಇರವ ಶಕ್ತಿ ಗೊತ್ತಾಗಿದೆ. ಹಾಗಾಗಿ ನಾಟಕವಾಡುತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯನ್ನು ಸಮರ್ಥಿಸಿಕೊಂಡ ಸೊಗಡು ಶಿವಣ್ಣ, ಅನಂತಕುಮಾರ್ ಹೆಗಡೆ ಹಿರಿಯ ರಾಜಕಾರಣಿ, ಐದು ಬಾರಿ ಸಂಸದರಾದವರು. ಅವರಿಗೆ ಈ ಹಿಂದೆಯೇ ಸ್ಥಾನ ಮಾನ ಸಿಗಬೇಕಿತ್ತು. ಈಗ ಕುರ್ಚಿ ಸಿಕ್ಕಿದೆ ಹಾಗಾಗಿ ಅವರ ಸಾಮರ್ಥ್ಯ ಗೊತ್ತಾಗಿದೆ. ಈ ಕಾರಣದಿಂದಲೇ ಅವರಿಗೆ ತಾರಾ ಪ್ರಚಾರಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಬಿಜೆಪಿ ಪಕ್ಷದ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಯಾವ ಅಸಮಾಧಾನವೂ ಇಲ್ಲ. ಬುದ್ದಿ ಜೀವಿಗಳು ಎನಿಸಿಕೊಂಡವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.