Asianet Suvarna News Asianet Suvarna News

ರಮೇಶ್‌ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಕುತ್ತು?

ರಮೇಶ್‌ ಜಾರಕಿಹೊಳಿ ಅವರ ಪೌರಾಡಳಿತ ಸಚಿವ ಸ್ಥಾನಕ್ಕೆ ಕುತ್ತು ಎದುರಾಗಿದೆ. ಏಕೆ? ಏನು ವಿಷಯ ಎನ್ನುವ  ವಿವರ ಈ ಕೆಳಗಿನಂತಿದೆ.

Social activist files complaint for dismiss to Ramesh Jarakiholi from cabinet
Author
Bengaluru, First Published Oct 14, 2018, 1:20 PM IST

ಬೆಂಗಳೂರು, [ಅ.14]: ಮೈತ್ರಿ ಸಚಿವ ಸಂಪುಟದಿಂದ ರಮೇಶ್‌ ಜಾರಕಿಹೊಳಿ ಅವರನ್ನು ವಜಾ ಮಾಡಬೇಕೆಂದು ದೂರು ಕೇಳಿಬಂದಿದೆ.

ಸಚಿವ ಸಂಪುಟದ ಪ್ರಮುಖ ಖಾತೆ ಹೊಂದಿದ್ದರೂ ಕಳೆದ ಐದು ಸಚಿವ ಸಂಪುಟ ಸಭೆಗಳಿಗೆ ಗೈರು ಹಾಜರಾಗಿರುವ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. 

ದೀರ್ಘಕಾಲದ ಅನಾರೋಗ್ಯ, ವಿದೇಶ ಪ್ರವಾಸದಂತಹ ಸನ್ನಿವೇಶಗಳಲ್ಲಿ ಸಚಿವರು ಸಚಿವ ಸಂಪುಟ ಸಭೆಗೆ ಗೈರು ಹಾಜರಾದ ಉದಾಹರಣೆ ಇದೆ. ಆದರೆ, ರಮೇಶ್‌ ಜಾರಕಿಹೊಳಿ ಅವರು ನಗರದಲ್ಲೇ ಇದ್ದರೂ ಉದ್ದೇಶಪೂರ್ವಕವಾಗಿ ಸಚಿವ ಸಂಪುಟ ಸಭೆಗೆ ಗೈರುಹಾಜರಾಗುತ್ತಿದ್ದಾರೆ.

ಜತೆಗೆ ನನಗೆ ಸಚಿವ ಸ್ಥಾನಕ್ಕಿಂತಲೂ ದೇವರು ದೊಡ್ಡವನು. ನಾನು ದೇವರಲ್ಲಿ ಬೇಡಿಕೊಂಡಿರುವುದು ಆಗುವವರೆಗೂ ಸಂಪುಟ ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಭೀಮಪ್ಪ ದೂರಿದ್ದಾರೆ.

ಪೌರಾಡಳಿತ ಇಲಾಖೆಯಲ್ಲಿ ಆಗಬೇಕಾದ ಕೆಲಸಗಳು, ಪೌರಕಾರ್ಮಿಕರ ಸಮಸ್ಯೆಗಳು ಸೇರಿದಂತೆ ನೂರಾರು ಸಮಸ್ಯೆಗಳಿವೆ. ಆದರೆ, ಇಲಾಖೆಗೆ ತಮಗೂ ಸಂಬಂಧವೇ ಇಲ್ಲವೆಂಬಂತೆ ಸಚಿವ ರಮೇಶ್‌ ಜಾರಕಿಹೊಳಿ ಅವರು ಸಚಿವ ಸಂಪುಟ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. 

ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ನಡವಳಿಕೆ ಹಾಗೂ ನಿಯಮಾವಳಿಗಳ ಪ್ರಕಾರ ಯಾವುದೇ ಸಮಿತಿ ಅಧ್ಯಕ್ಷ ರ ಅಪ್ಪಣೆ ಇಲ್ಲದೆ, ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಮಿತಿ ಸಭೆಗಳಿಗೆ ಗೈರಾಗಿದ್ದರೆ ಅವರನ್ನು ಸದಸ್ಯತ್ವದಿಂದ ತೆಗೆದು ಹಾಕಲು ಅವಕಾಶ ಇದೆ. ಹೀಗಾಗಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Follow Us:
Download App:
  • android
  • ios