ಯಶ್ ಹತ್ಯೆಗೆ ಸೈಕಲ್ ರವಿ ಸ್ಕೆಚ್ : ಅಸಲಿ ಸತ್ಯ ಬಿಚ್ಚಿಟ್ಟ ಸಿಸಿಬಿ
- ಸ್ಟಾರ್ ವಾರ್ ಗಲಾಟೆಯಿಂದ ಗಾಳಿ ಸುದ್ದಿಯಾದ ಘಟನೆ
- ಅಸಲಿಗೆ ಸೈಕಲ್ ರವಿಗೂ ಇದಕ್ಕೂ ಸಂಬಂಧವೇ ಇಲ್ಲ
- 4 ವರ್ಷಗಳ ಹಿಂದೆ ಹಿಂದೆ ನಡೆದ ಸ್ಟಾರ್ ವಾರ್
ಬೆಂಗಳೂರು[ಜು.12]: ಕನ್ನಡದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ರೌಡಿ ಸೈಕಲ್ ರವಿ ಸ್ಕೆಚ್ ಹಾಕಿದ್ದ ಎಂಬ ಸುದ್ದಿ ರಾಜ್ಯಾದ್ಯಂತ ಯಶ್ ಅಭಿಮಾನಿಗಳಿಗೆ ಸಂಚಲನ ಮೂಡಿಸಿದೆ. ಆದರೆ ಸುದ್ದಿಯ ಅಸಲಿಯತ್ತನ್ನು ಸುವರ್ಣ ನ್ಯೂಸ್ .ಕಾಂ ಸೋದರ ಸಂಸ್ಥೆ ಸುವರ್ಣ ನ್ಯೂಸ್ ಬಿಚ್ಚಿಟ್ಟಿದೆ.
ತನಿಖೆ ನಡೆಸುತ್ತಿರುವ ಸಿಸಿಬಿ ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಯಾವುದೇ ಯೋಜನೆಯೇ ನಡೆದಿಲ್ಲ.ರಾಕಿಂಗ್ ಸ್ಟಾರ್ ಹೆಸರು ಚಾಲ್ತಿಗೆ ಬಂದಿದ್ದು ಹೇಗೆ ಅನ್ನುವುದರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಸ್ಟಾರ್ ವಾರ್ ಎಲ್ಲದಕ್ಕೂ ಕಾರಣವಾಯ್ತು
4 ವರ್ಷಗಳ ಹಿಂದೆ ಯಶ್ ಹಾಗೂ ಸೂಪರ್ ಸ್ಟಾರ್ ಅಭಿಮಾನಿಗಳ ಮಧ್ಯೆ ತಮ್ಮ ನಟರೆ ಗ್ರೇಟ್ ಎಂದು ಸ್ಟಾರ್ ವಾರ್ ನಡೆದಿತ್ತು. ಒಂದೇ ಏರಿಯದ ಎರಡೂ ಚಿತ್ರಮಂದಿರದಲ್ಲಿ ಪ್ರದರ್ಶನದ ವೇಳೆ ನಡೆದಿದ್ದ ಅಭಿಮಾನಿಗಳ ನಡುವೆ ಜಗಳವಾಗಿತ್ತು. ತಾರಕಕ್ಕೇರಿದ್ದ ಅಭಿಮಾನಿಗಳ ಗಲಾಟೆ ಹತ್ಯೆಯ ಪ್ಲಾನ್ ವರೆಗೂ ಮುಂದುವರೆದಿತ್ತು.
ಇದೇ ಕಾರಣಕ್ಕಾಗಿ ಪರಸ್ಪರರ ಹತ್ಯೆಗಾಗಿ ಘಟಾನುಘಟಿ ರೌಡಿಗಳನ್ನು ಅಭಿಮಾನಿಗಳು ಸಂಪರ್ಕಿಸಿದ್ದರು. ಈ ಸಂದರ್ಭದಲ್ಲಿ ಯಶ್ ಅಭಿಮಾನಿಗಳ ಹತ್ಯೆಗೆ ಮತ್ತೊಬ್ಬ ಸ್ಟಾರ್ ಅಭಿಮಾನಿಗಳು ಸೈಕಲ್ ರವಿ ಆಪ್ತ ಕೋದಂಡನ ಸಂಪರ್ಕ ಮಾಡಿದ್ದರು. ಆದರೆ ಅಸಲಿಗೆ ಸೈಕಲ್ ರವಿಗೂ ಇದಕ್ಕೂ ಸಂಬಂಧವೇ ಇರಲಿಲ್ಲ.
ಗಲಾಟೆ ಅತಿರೇಕಕ್ಕೆ ಹೋದಾಗ ಸಿಸಿಬಿ ಪೊಲೀಸರು ಇಬ್ಬರು ಕಡೆಯ ಅಭಿಮಾನಿಗಳು ಹಾಗೂ ರೌಡಿಗಳನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಗುಂಡೇಟು ತಿಂದಿರುವ ಸೈಕಲ್ ರವಿ ಇನ್ನು ಚೇತರಿಸಿಕೊಳ್ಳುತ್ತಿದ್ದು ಯಶ್ ಹತ್ಯೆಗೆ ಎನ್ನಲಾದ ಪ್ರಕರಣದಲ್ಲಿ ವಿಚಾರಣೆಯನ್ನೇ ನಡೆಸಿಲ್ಲ. ಅಭಿಮಾನಿಗಳ ಬಾಯಿಂದ ಬಾಯಿಗೆ ಹರಡಿದ ಮಾತು ಸೈಕಲ್ ರವಿಯೇ ಹತ್ಯೆಗೆ ಯೋಜನೆ ರೂಪಿಸಿದ್ದ ಎಂದು ಬಿಂಬಿಸಲಾಯಿತು.
"