ಸಿಎಂ ಹುದ್ದೆ ಖಾಲಿಯಾದ್ರೆ ಸಿದ್ದರಾಮಯ್ಯ ಮುಖ್ಯಮಂತ್ರಿ
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಾದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮುಖಂಡರೋರ್ವರು ಭವಿಷ್ಯ ನುಡಿದಿದ್ದಾರೆ.
ಕೋಲಾರ : ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಖಾಲಿಯಾದಾಗ ಮುಂದೆ ಸಿದ್ದರಾಮಯ್ಯ ಸಿಎಂ ಆಗಬಹುದು ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ನಾರಾಯಣಸ್ವಾಮಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮೇದಾವಿ, ಸಿಎಂ ಆಗಿ ಐದು ವರ್ಷ ಉತ್ತಮ ಆಡಳಿತ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಧರ್ಮದ ಆದಾರದಲ್ಲಿ ಕೆಲಸ ಮಾಡುತ್ತದೆ. ಎಂದಿಗೂ ಕೂಡ ಧರ್ಮ ಮುರಿಯುವುದಿಲ್ಲ ಎಂದರು.
ಯಾವುದೆ ಗೊಂದಲ ಇಲ್ಲದೇ ಎಚ್.ಡಿ ಕುಮಾರಸ್ವಾಮಿ ಅವರೆ ನಮ್ಮ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. 23ರ ನಂತರ ಸರ್ಕಾರ ಪತನವಾಗಲಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿಯಷ್ಟೇ. ಊಹಾಪೋಹ ಸೃಷ್ಟಿ ಮಾಡಿ ಸಣ್ಣ ವಿಚಾರವನ್ನು ದೊಡ್ಡದಾಗಿ ಬಿಂಬಿಸಲಾಗುತ್ತದೆ ಎಂದರು.
ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕನಸು ಕಾಣುತ್ತಿದ್ದು, ಅದೆಂದಿಗೂ ಕೂಡ ನನಸಾಗುವುದಿಲ್ಲ. ಯಾವ ಆಪರೇಷನ್ ಆಗಲ್ಲ, ಯಾವ ಶಾಸಕರು ಖರೀದಿ ಆಗುವುದಿಲ್ಲ. ಕಳೆದ 10 ತಿಂಗಳಿನಿಂದಲೂ ಇಂತಹ ಹೇಳಿಕೆಗಳು ಕೇಳಿಬರುತ್ತಿವೆ. ಹೈ ಕಮಾಂಡ್ ನಿರ್ಧಾರದಂತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದು ವರೆಯುತ್ತಾರೆ ಎಂದರು.
ಸದ್ಯ ರಾಜ್ಯ ರಾಜಕೀಯದಲ್ಲಿ ವಿಶ್ವನಾಥ್ ಹಾಗೂ ಸಿದ್ದರಾಮಯ್ಯ ನಡುವಿನ ವಾಕ್ಸಮರ ಹೆಚ್ಚಾಗಿದ್ದು, ಇದು ಕೇವಲ ಮಾಧ್ಯಮಗಳ ಸೃಷ್ಟಿ. ಸಣ್ಣ ವಿಚಾರವನ್ನು ದೊಡ್ಡಮಟ್ಟದಲ್ಲಿ ತೋರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.