ಸಿದ್ದು ದಡ್ಡ, ಅವರಿಗೆ ತಲೆ ಸರಿ ಇಲ್ಲ: ಈಶ್ವರಪ್ಪ
ಸಿದ್ದು ದಡ್ಡ, ಅವರಿಗೆ ತಲೆ ಸರಿ ಇಲ್ಲ: ಈಶ್ವರಪ್ಪ| ಅಮಿತ್ ಶಾ ಅವರನ್ನು ದಡ್ಡ ಎಂದು ಟೀಕಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿರುಗೇಟು
ಶಿವಮೊಗ್ಗ[ಸೆ.18]: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದಡ್ಡ ಎಂದು ಟೀಕಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಓರ್ವ ದಡ್ಡ. ಸಿದ್ದರಾಮಯ್ಯಗೆ ತಲೆ ಇದ್ದಿದ್ರೆ ಹೀಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಪಕ್ಷ ಸ್ಥಾನ ಕೈತಪ್ಪಿ ಹೋಗುತ್ತದೆ ಎಂದು ಸಿದ್ದರಾಮಯ್ಯ ಈಗ ಒದ್ದಾಡುತ್ತಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ಕುರಿತು ಇಲ್ಲಸಲ್ಲದ ಹೇಳಿಕೆ ನೀಡತೊಡಗಿದ್ದಾರೆ. ಅಮಿತ್ ಶಾ ದಡ್ಡ ಎಂದು ನೀಡಿರುವ ಹೇಳಿಕೆಯನ್ನು ಸಿದ್ದರಾಮಯ್ಯ ವಾಪಸ್ ಪಡೆಯಬೇಕು. ಜನತೆ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.
ಅಮಿತ್ ಶಾ ಹಿಂದಿ ಹೇರಿಕೆ ಮಾಡುತ್ತಿಲ್ಲ. ಹಿಂದಿ ಭಾಷೆ ದೇಶವನ್ನು ಒಂದು ಮಾಡುವ ಭಾಷೆ ಎಂಬುದು ನಿಜ. ಆದರೆ, ನಮ್ಮ ರಾಜ್ಯದಲ್ಲಿ ಮೊದಲ ಆದ್ಯತೆ ಕನ್ನಡಕ್ಕೆ ಎಂದು ಪ್ರತಿಕ್ರಿಯಿಸಿದ್ದಾರೆ.
ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇದ್ದರೇನೆು? ಇಲ್ಲದಿದ್ದರೇನು? ಮೈತ್ರಿಯಿದ್ದಾಗ 25 ಸೀಟು ಪಡೆದಿದ್ದೇವೆ. ಈಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಂಪೂರ್ಣ ನಿರ್ನಾಮವಾಗಿದೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರು ಬಿಜೆಪಿ ಸ್ಪಷ್ಟಬಹುಮತ ಪಡೆಯುತ್ತದೆಂಬ ವಿಶ್ವಾಸ ತಮಗಿದೆ ಎಂದಿದ್ದಾರೆ.