ಎಂಬಿಪಾ ವಿರುದ್ಧ ಹಿಂದೂ ಧರ್ಮ ಒಡೆಯುವ ಆರೋಪ: ಮಹಿಳೆಯ ಬಂಧನ
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಚುನಾವಣೆ ಬಳಿಕ ಶುರುವಾದ ರಾಜಕೀಯ| ಪ್ರತ್ಯೇಕ ಧರ್ಮ ವಿರೋಧಿಸಿದ್ದ ಶೃತಿ ಬೆಳ್ಳಕ್ಕಿ ಬಂಧನ|
ಧಾರವಾಡ[ಏ.24]: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಲೋಕಸಭಾ ಚುನಾವಣಾ ಮತದಾನದ ಬಳಿಕ ಮತ್ತೆ ರಾಜಕೀಯ ತಿರುವು ಪಡೆದುಕೊಂಡಿದೆ. ಪ್ರತ್ಯೇಕ ಧರ್ಮ ವಿರೋಧಿಸಿದ್ದ ಶೃತಿ ಬೆಳ್ಳಕ್ಕಿಯನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆ ಶೃತಿ, ಧಾರವಾಡ ತಾಲೂಕಿನ ಗರಗ ಗ್ರಾಮದವರು. ಇವರು ಧರ್ಮ ವಿಚಾರವಾಗಿ ಗೃಹ ಸಚಿವ ಎಂ. ಬಿ. ಪಾಟೀಲ್ ಸೋನಿಯಾ ಗಾಂಧಿಗೆ ಬರೆದಿದ್ದರೆನ್ನಲಾದ ಪತ್ರದ ವಿಚಾರವಾಗಿ ಫೇಸ್ಬುಕ್ ಮೂಲಕ ಮಾತನಾಡುತ್ತಾ ಎಂ. ಬಿ. ಪಾಟೀಲ್ ಸೇರಿದಂತೆ ಹಲವರ ವಿರುದ್ಧ ಹರಿಹಾಯ್ದಿದ್ದರು ಹಾಗೂ ಹಿಂದೂ ಧರ್ಮ ಒಡೆಯಲು ಪತ್ರ ಬರೆಯಲಾಗಿದೆ ಎಂದು ಆರೋಪಿಸಿದ್ದರು. ಈ ಪೋಸ್ಟ್ ಬಹಳಷ್ಟು ವೈರಲ್ ಆಗಿತ್ತು.
ಈ ವಿಚಾರವಾಗಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಶೃತಿಯನ್ನು ಬಂಧಿಸಿದ್ದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಸದ್ಯ ಶೃತಿ ಪತಿ ಹಾಗೂ ಬಿಜೆಪಿ ಮುಖಂಡ ಅಮರೇಶ ಉಳವಣ್ಣವ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.