ಇಂದಿನಿಂದ ಶ್ರವಣಬೆಳಗೊಳದಲ್ಲಿ ಐತಿಹಾಸಿಕ ಮಸ್ತಕಾಭಿಷೇಕ ಸಂಭ್ರಮ
ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ಇಂದು ಐತಿಹಾಸಿಕ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಇದಕ್ಕಾಗಿ ಜೈನಕಾಶಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. 12 ವರ್ಷಗಳಿಗೊಮ್ಮೆ ನಡೆಯೋ ಮಹಾಮಜ್ಜನ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.
ಶ್ರವಣಬೆಳಗೊಳ: ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ಇಂದು ಐತಿಹಾಸಿಕ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಇದಕ್ಕಾಗಿ ಜೈನಕಾಶಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. 12 ವರ್ಷಗಳಿಗೊಮ್ಮೆ ನಡೆಯೋ ಮಹಾಮಜ್ಜನ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.
ವಿಂಧ್ಯಗಿರಿಯ ಮೇಲೆ ವಿರಾಜಮಾನನಾಗಿರುವ 58.8 ಅಡಿ ಎತ್ತರದ ವಿರಾಗಿಗೆ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆ ವರೆಗೆ ಮಸ್ತಕಾಭಿಷೇಕ ನಡೆಯಲಿದೆ. ಮಧ್ಯಾಹ್ನ 2 ರಿಂದ 3.30 ರ ವರೆಗೆ 108 ಕಳಾಭಿಷೇಕ ನಡೆಯಲಿದ್ದು, 3.30ರಿಂದ 5.30 ರ ವರೆಗೆ ಪಂಚಾಮೃತ ಅಭಿಷೇಕ ನಡೆಯಲಿದೆ.
5.30ರಿಂದ ಸಂಜೆ 6 ಗಂಟೆವರೆಗೆ ಅಷ್ಟದ್ರವ್ಯ ಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ. ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಉತ್ಸವಕೆ ಶ್ರವಣಬೆಳಗೊಳ ಸಕಲ ರೀತಿಯಲ್ಲೂ ಸಿಂಗಾರಗೊಂಡಿದೆ. ಇಡೀ ಊರ ತುಂಬೆಲ್ಲಾ ಬಾಹುಬಲಿಯ ಫ್ಲೆಕ್ಸ್ ಹಾಗೂ ಬಣ್ಣ ಬಣ್ಣದ ಧ್ವಜಗಳು ರಾರಾಜಿಸುತ್ತಿವೆ. ಇದೇ ಮೊದಲ ಬಾರಿಗೆ ನಿರ್ಮಿಸಿರುವ ಹೈಟೆಕ್ ಅಟ್ಟಣಿಗೆ ಏರಲು ಗಣ್ಯರಿಗೆ 2 ಮತ್ತು ಮಸ್ತಕಾಭಿಷೇಕ ಸಾಮಗ್ರಿ ಸಾಗಿಸಲು 3 ವಿಶೇಷ ಲಿಫ್ಟ್ ಅಳವಡಿಸಲಾಗಿದೆ.
ಸಿಎಂ ಭಾಗಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರದಂದು ಮಹಾಮಸ್ತಕಾಭಿಷೇಕ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಲಿಕಾಫ್ಟರ್ ಮೂಲಕ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೊರಡುವ ಮುಖ್ಯಮಂತ್ರಿ, ಮಧ್ಯಾಹ್ನ 1.50ಕ್ಕೆ ಶ್ರವಣಬೆಳಗೊಳಕ್ಕೆ ಆಗಮಿಸಲಿದ್ದಾರೆ. ಡೋಲಿಗಳ ಮೂಲಕ ವಿಂಧ್ಯಗಿರಿ ಬೆಟ್ಟಕ್ಕೆ ಸಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.