ವಿಶ್ವಾಸ ಕಳಕೊಂಡ ಸಿಎಂ ಹೇಗೆ ವಿಶ್ವಾಸಮತ ಕೇಳ್ತಾರೆ?
ಕರ್ನಾಟಕ ರಾಜಕೀಯ ಪ್ರಹಸನ ಮುಂದುವರಿದಿದೆ. ರಾಜ್ಯದಲ್ಲಿ ಇದು ಮುಗಿಯುವ ಲಕ್ಷಣಗಳು ಮಾತ್ರ ಕಾಣಿಸುತ್ತಿಲ್ಲ. ಆದರೆ ಸಿಎಂ ವಿಶ್ವಾಸಮತ ಯಾಚನೆಗೆ ಸಿದ್ಧವಾಗಿದ್ದು, ಈ ಬಗ್ಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು [ಜು.15] : ಶಾಸಕರ ವಿಶ್ವಾಸ ಕಳೆದುಕೊಂಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸದನದಲ್ಲಿ ಯಾವ ರೀತಿ ವಿಶ್ವಾಸ ಮತ ಕೇಳುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದಿದ್ದಾರೆ. ಆದರೆ ಅವರ ಶಾಸಕರಿಗೆ ಈ ಬಗ್ಗೆ ನಂಬಿಕೆ ಇಲ್ಲ. ಹೀಗಿರುವಾಗ ಯಾವ ರೀತಿ ವಿಶ್ವಾಸ ಮತ ಕೇಳುತ್ತಾರೆ ಎಂದರು.
ಬಹುಮತ ಇಲ್ಲದಿದ್ದರೂ ಭಂಡ ಧೈರ್ಯದಿಂದ ಬಹುಮತ ಸಾಬೀತು ಪಡಿಸುವುದಾಗಿ ಘೋಷಣೆ ಮಾಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಮವಾರವೇ ಬಹುಮತ ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದರು.