ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಶಿವಸೇನೆ ಪಟ್ಟು! ಬಾಬ್ರೀ ಮಸೀದಿ ಕೆಡವಲು ಕೇವಲ 17 ನಿಮಿಷ ಸಾಕಾಗಿತ್ತು! ಸುಗ್ರೀವಾಜ್ಞೆಗೆ ಏಕಿಷ್ಟು ಸಮಯ ತೆಗೆದುಕೊಳ್ಳುತ್ತಿದೆ ಕೇಂದ್ರ ಸರ್ಕಾರ?! ಮೋದಿಗೆ ಶಿವಸೇನೆ ಹಿರಿಯ ನಾಯಕ ಸಂಜಯ್ ರಾವತ್ ಪ್ರಶ್ನೆ

ಮುಂಬೈ(ನ.23): 17 ನಿಮಿಷಗಳಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿದ್ದೆವು. ರಾಮ ಮಂದಿರ ನಿರ್ಮಾಣ ಮಾಡಲು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರಕ್ಕೆ ಇನ್ನೆಷ್ಟು ಸಮಯ ಬೇಕು ಎಂದು ಶಿವಸೇನೆ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ. 

ಈ ಕುರಿತು ಮಾತನಾಡಿರುವ ಶಿವಸೇನೆ ಹಿರಿಯ ನಾಯಕ ಸಂಜಯ್ ರಾವತ್, 1992ರಲ್ಲಿ ನಾವು ಕೇವಲ 17 ನಿಮಿಷಗಳಲ್ಲಿ ನಾವು ಬಾಬ್ರಿ ಮಸೀದಿಯನ್ನು ಕೆಡವಿದ್ದೆವು. ಆದರೆ ರಾಮ ಮಂದಿರ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರಕ್ಕೆ ಇನ್ನೆಷ್ಟು ಸಮಯ ಬೇಕು ಎಂದು ಪ್ರಶ್ನಿಸಿದ್ದಾರೆ.

Scroll to load tweet…

ಉತ್ತರಪ್ರದೇಶದಲ್ಲಿ, ಕೇಂದ್ರದಲ್ಲಿ ಹಾಗೂ ರಾಷ್ಟ್ರಪತಿ ಭವನದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತಾರೂಢ ಸರ್ಕಾರ ಶೀಘ್ರಗತಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ರಚಿಸಬೇಕು ಎಂದು ರಾವತ್ ಇದೇ ವೇಳೆ ಒತ್ತಾಯಿಸಿದರು.

ರಾಮ ಮಂದಿರ ನಿರ್ಮಾಣದ ಪರವಾಗಿ ರಾಜ್ಯಸಭೆಯಲ್ಲಿ ಹಲವಾರು ಸದಸ್ಯರಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ವಿರೋಧ ವ್ಯಕ್ತಪಡಿಸುತ್ತಿರುವವರು ಇನ್ನು ಮುಂದೆ ದೇಶದಲ್ಲಿ ಓಡಾಡಬೇಕಾದರೆ, ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ರಾವತ್ ಎಚ್ಚರಿಸಿದ್ದಾರೆ.