ಜಮ್ಮುವಿನಲ್ಲಿ ನಿರ್ಬಂಧ ಸಂಪೂರ್ಣ ಹಿಂತೆಗೆತ| ಕಾಶ್ಮೀರದಲ್ಲಿ ಅಲ್ಲಲ್ಲಿ ಮಾತ್ರ ಕಟ್ಟುನಿಟ್ಟಿನ ನಿಗಾ| 370 ರದ್ದಾದ ಬಳಿಕವೂ ಕಾಶ್ಮೀರ ಬಹುತೇಕ ಶಾಂತ

ಶ್ರೀನಗರ[ಆ.15]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮುನ್ನಾ ದಿನ ರಾಜ್ಯದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಜಮ್ಮು ಭಾಗದಲ್ಲಿ ಸಂಪೂರ್ಣವಾಗಿ ಹಿಂಪಡೆದುಕೊಳ್ಳಲಾಗಿದೆ. ಆದರೆ ಕಾಶ್ಮೀರದ ಕೆಲವೊಂದು ಭಾಗಗಳಲ್ಲಿ ಮುಂದುವರಿಸಲಾಗಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಶ್ರೀನಗರದ ವಿವಿಧ ಭಾಗಗಳು ಹಾಗೂ ಕಾಶ್ಮೀರದ ಇತರೆ ಜಿಲ್ಲೆಗಳಲ್ಲಿ ಸಣ್ಣಪುಟ್ಟಘಟನೆಗಳು ನಡೆದಿವೆ. ಆದರೆ ಅವನ್ನು ಸ್ಥಳೀಯವಾಗಿಯೇ ನಿಯಂತ್ರಿಸಲಾಗಿದೆ. ಯಾರಿಗೆ ಆಗಲೀ ಗಂಭೀರ ಪ್ರಮಾಣದ ಗಾಯಗಳಾದ ವರದಿಯಾಗಿಲ್ಲ. ಕೆಲವು ವ್ಯಕ್ತಿಗಳಿಗೆ ಪೆಲ್ಲೆಟ್‌ಗಳಿಂದ ಗಾಯವಾಗಿತ್ತಾದರೂ, ಚಿಕಿತ್ಸೆ ನೀಡಲಾಗಿದೆ. ಯಾವುದೇ ಸಾವು ಸಂಭವಿಸದಂತೆ ನೋಡಿಕೊಳ್ಳುವುದೇ ನಮ್ಮ ದೊಡ್ಡ ಜವಾಬ್ದಾರಿ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮುನೀರ್‌ ಖಾನ್‌ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಜಮ್ಮು ಭಾಗದಲ್ಲಿ ಎಲ್ಲ ರೀತಿಯ ನಿರ್ಬಂಧಗಳನ್ನು ಸಂಪೂರ್ಣ ಸಡಿಲಿಸಲಾಗಿದೆ. ಹೀಗಾಗಿ ಶಾಲೆ ಹಾಗೂ ಇನ್ನಿತರೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕಾಶ್ಮೀರದಲ್ಲಿ ನಾಗರಿಕ ಸರಬರಾಜು, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ಹಾಗೂ ವೈದ್ಯಕೀಯ ಸೌಲಭ್ಯಗಳು ಸಹಜ ರೀತಿಯಲ್ಲೇ ಇವೆ ಎಂದಿದ್ದಾರೆ.