ಮಧುಮೇಹ, ಎದೆನೋವಿನಿಂದ ಬಳಲುತ್ತಿರುವ ರವಿ ಬೆಳಗೆರೆ ಕಿಮ್ಸ್'ಗೆ ದಾಖಲು
ಸೋಮವಾರವಷ್ಟೇ ಧಾರವಾಡದ ಎಸ್ಡಿಎಂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಮಂಗಳವಾರ ಬೆಳಗಿನ ಜಾವ ಇಲ್ಲಿನ ಕಿಮ್ಸ್ಗೆ ದಾಖಲಾಗಿದ್ದಾರೆ. ಮಧುಮೇಹ, ಎದೆನೋವಿನಿಂದ ಬಳಲುತ್ತಿರುವ ರವಿ ಬೆಳಗೆರೆ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಬ್ಬಳ್ಳಿ (ಜೂ.27): ಸೋಮವಾರವಷ್ಟೇ ಧಾರವಾಡದ ಎಸ್ಡಿಎಂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಮಂಗಳವಾರ ಬೆಳಗಿನ ಜಾವ ಇಲ್ಲಿನ ಕಿಮ್ಸ್ಗೆ ದಾಖಲಾಗಿದ್ದಾರೆ. ಮಧುಮೇಹ, ಎದೆನೋವಿನಿಂದ ಬಳಲುತ್ತಿರುವ ರವಿ ಬೆಳಗೆರೆ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸದನ ಸಮಿತಿ ಶಿಫಾರಸಿನ ಮೇರೆಗೆ ಸಭಾಪತಿ ಕೆ.ಬಿ. ಕೋಳಿವಾಡ ಅವರ ಆದೇಶ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿರುವ ರವಿ ಬೆಳಗೆರೆ, ಶನಿವಾರ ಬೆಳಗಿನ ಜಾವದಿಂದ ಎಸ್ಡಿಎಂನಲ್ಲಿ ಚಿಕಿತ್ಸೆ ಪಡೆದು ಸೋಮವಾರ ಡಿಸ್ಚಾರ್ಜ್ ಆಗಿದ್ದರು. ಆದರೆ ಮಂಗಳವಾರ ಬೆಳಗಿನ ಜಾವ ಸುಮಾರು ೨.೩೦ಕ್ಕೆ ತಮ್ಮ ಕಾರು ಚಾಲಕನ ಜತೆ ಕಿಮ್ಸ್ಗೆ ಆಗಮಿಸಿದ ಅವರು ದಾಖಲಾಗಿದ್ದಾರೆ. ಬೆಳಗೆರೆಯವರ ರಕ್ತದಲ್ಲಿ ಸಕ್ಕರೆ ಹಾಗೂ ಸೋಡಿಯಂ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಅರೆ ಪ್ರಜ್ಞಾವಸ್ಥೆಯಲ್ಲಿರುವ ಅವರು, ಸಾಕಷ್ಟು ಬಳಲಿದ್ದಾರೆ. ಎದೆನೋವು ಎಂದು ಹೇಳಿದ್ದರಿಂದ ವೈದ್ಯರು ಬೆಳಗ್ಗೆ ಎದೆ ಹಾಗೂ ಲಿವರ್ ತಪಾಸಣೆ ನಡೆಸಿದ್ದಾರೆ. ಬ್ರೇನ್ ಸ್ಕ್ಯಾನ್ ಸಹ ನಡೆಸಿದ್ದು, ಎಲ್ಲವೂ ಸಾಮಾನ್ಯಸ್ಥಿತಿಯಲ್ಲಿದೆ ಎಂದು ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ಪ ಅನುರಶೆಟ್ರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಸದ್ಯ ರವಿ ಬೆಳಗೆರೆಯವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಅವರಿಗೆ ಬೇಕಾಗಿರುವ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತಿದೆ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಡಾ. ಅನೂರಶೆಟ್ರು ಹೇಳಿದರು.
ರವಿ ಬೆಳಗೆರೆಯವರು ಕಿಮ್ಸ್ಗೆ ದಾಖಲಾಗಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಅವರ ಬಂಧನಕ್ಕಾಗಿ ಕಿಮ್ಸ್ಗೆ ತೆರಳಿದ್ದರು. ಬೆಂಗಳೂರು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ರವಿ ಬೆಳಗೆರೆಯವರ ಬಂಧನದ ಜವಾಬ್ದಾರಿಯನ್ನು ಮಹಾನಗರ ಪೊಲೀಸರಿಗೆ ವಹಿಸಿದ್ದಾರೆ. ರೈ,ಶೆಟ್ಟರ್ ಭೇಟಿ: ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಖ್ಯಾತ ನಟ ಪ್ರಕಾಶ್ ರೈ ಆಸ್ಪತ್ರೆಗೆ ಭೇಟಿ ನೀಡಿ ಬೆಳಗೆರೆ ಅವರ ಆರೋಗ್ಯ ವಿಚಾರಿಸಿದರು.