ಹಾಜರಾತಿ ವೇಳೆ ಜೈಹಿಂದ್‌/ ಜೈಭಾರತ್‌ ಎಂದೇ ಕೂಗಬೇಕು| ದೇಶಪ್ರೇಮ ಹೆಚ್ಚಿಸಲು ಗುಜರಾತ್‌ ಸರ್ಕಾರದಿಂದ ಸುತ್ತೋಲೆ

ಅಹಮದಾಬಾದ್‌[ಜ.02]: ಶಾಲಾ ತರಗತಿಗಳಲ್ಲಿ ಶಿಕ್ಷಕರು ಹಾಜರಾತಿ ತೆಗೆದುಕೊಳ್ಳುವಾಗ ವಿದ್ಯಾರ್ಥಿಗಳು ‘ಯೆಸ್‌ ಸರ್‌’ ಅಥವಾ ‘ಯೆಸ್‌ ಮೇಡಂ’ ಎಂದು ಕೂಗಿ ಹೇಳಿ ತಾವು ಹಾಜರಿರುವುದನ್ನು ಖಚಿತಪಡಿಸುವುದು ಸರ್ವೇ ಸಾಮಾನ್ಯ. ಆದರೆ ಬಿಜೆಪಿ ಆಳ್ವಿಕೆಯ ಗುಜರಾತಿನಲ್ಲಿ ಇನ್ನು ಮುಂದೆ ಆ ರೀತಿ ಹೇಳುವಂತಿಲ್ಲ. ಬದಲಾಗಿ ‘ಜೈಹಿಂದ್‌’ ಅಥವಾ ‘ಜೈ ಭಾರತ್‌’ ಎಂಬ ಪದಗಳನ್ನು ಬಳಸಬೇಕು ಎಂದು ಗುಜರಾತ್‌ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಬ್ಬ ವಿದ್ಯಾರ್ಥಿ ತನ್ನ ಶಾಲಾ ದಿನಗಳಲ್ಲಿ ಕನಿಷ್ಠ 10 ಸಾವಿರ ಬಾರಿಯಾದರೂ ಯೆಸ್‌ ಸರ್‌/ಯೆಸ್‌ ಮೇಡಂ ಎಂದು ಹೇಳುತ್ತಾನೆ. ಅದರ ಬದಲಾಗಿ ಜೈಹಿಂದ್‌/ ಜೈಭಾರತ್‌ ಎಂದು ಹೇಳಿದರೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಭಾವ ಚಿಕ್ಕವಯಸ್ಸಿನಲ್ಲೇ ಹೆಚ್ಚಾಗುತ್ತದೆ ಎಂದು ಶಿಕ್ಷಣ ಸಚಿವ ಭೂಪೇಂದ್ರಸಿನ್ಹ ಚೂಡಾಸಮ ಸಮರ್ಥಿಸಿಕೊಂಡಿದ್ದಾರೆ.

ಗುಜರಾತಿನಲ್ಲಿ ಕುಸಿಯುತ್ತಿರುವ ಶಿಕ್ಷಣ ಗುಣಮಟ್ಟದ ಬಗ್ಗೆ ಗಮನಹರಿಸುವುದರ ಬದಲು ಸರ್ಕಾರ ಈ ರೀತಿಯ ಸುತ್ತೋಲೆ ಹೊರಡಿಸಿರುವುದಕ್ಕೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ದೇಶಭಕ್ತಿಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಒತ್ತಡ ಹೇರಬಾರದು. ಏಕೆಂದರೆ, ಆ ಭಾವನೆ ಪ್ರತಿಯೊಬ್ಬರ ರಕ್ತದಲ್ಲೇ ಇದೆ ಎಂದು ಪಟೇಲ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ಟೀಕಿಸಿದ್ದಾರೆ.