ಶಬರಿಮಲೆ ಉಳಿಸಿ ಹೋರಾಟ ಮತ್ತಷ್ಟು ತೀವ್ರ
ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರವೇಶ ನೀಡಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ್ನು ವಿರೋಧಿಸಿ, ಕೇರಳದಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿವೆ.
ತಿರುವನಂತಪುರ: ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದನ್ನು ವಿರೋಧಿಸಿ ಅಯ್ಯಪ್ಪನ ಭಕ್ತಾದಿಗಳು ಮತ್ತು ವಿವಿಧ ಸಂಘಟನೆಗಳು ಕೇರಳದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಮತ್ತಷ್ಟುತೀವ್ರ ಸ್ವರೂಪ ಪಡೆದುಕೊಂಡಿದೆ. ಶುಕ್ರವಾರ ಕೂಡಾ ರಾಜ್ಯದ ವಿವಿಧೆಡೆ ಭಾರೀ ಪ್ರತಿಭಟನೆ ನಡೆದಿದೆ. ಈ ನಡುವೆ ಪ್ರತಿಭಟನೆಗೆ ಬಿಜೆಪಿ ನೇತೃತ್ವದ ಎನ್ಡಿಎ ಪಕ್ಷಗಳು ಹಾಗೂ ಕೇರಳದಲ್ಲಿ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಕೂಡಾ ಬೆಂಬಲ ವ್ಯಕ್ತಪಡಿಸಿರುವ ಕಾರಣ, ಹೋರಾಟಕ್ಕೆ ಮತ್ತಷ್ಟುಕಾವು ಸಿಕ್ಕಿದೆ.
ಸುಪ್ರೀಂ ತೀರ್ಪು ವಿರೋಧಿಸಿ ಹಾಗೂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇರಲು ನಿರ್ಧರಿಸಿರುವ ಕೇರಳ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿ ನೇತೃತ್ವದ ಎನ್ಡಿಎ ಶಬರಿಮಲೆ ಉಳಿಸಿ ಎಂಬ ಪ್ರತಿಭಟನಾ ಮೆರವಣಿಗೆ ಆಯೋಜಿಸಿದೆ. ಶುಕ್ರವಾರ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದರಾದ ಪಿ.ಸಿ.ಮೋಹನ್, ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಎನ್ಡಿಎ ನಾಯಕರು ಭಾಗವಹಿಸಿದ್ದರು. ಈ ರಾರಯಲಿ ಅ.15ರಂದು ರಾಜ್ಯ ವಿಧಾನಸಭೆ ಮುಂಭಾಗದಲ್ಲಿ ಮುಕ್ತಾಯವಾಗಲಿದೆ.
ಈ ನಡುವೆ ಶಬರಿಮಲೆ ದೇಗುಲದೊಂದಿಗೆ ನಂಟುಹೊಂದಿರುವ ಪಂಡಲಂ ರಾಜಮನೆತನದ ಸದಸ್ಯರು ಮತ್ತು ವಿವಿಧ ರಾಜಕೀಯ ಪಕ್ಷಗಳ ನಾಯಕರು ಶುಕ್ರವಾರ ರಾಜ್ಯ ವಿಧಾನಸಭೆಯ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರಾಜಮನೆತನದ ಶಶಿಕುಮಾರ ವರ್ಮಾ, ಕೇವಲ ಒಂದು ಕೋರ್ಟ್ ಆದೇಶದಿಂದ ಶತಮಾನಗಳ ಮೂಲಕ ನಡೆದುಬಂದ ಸಂಪ್ರದಾಯ ಅಳಿಸಿಹಾಕಲಾಗದು. ಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಪ್ರಶ್ನಿಸಬೇಕು ಎಂದು ಒತ್ತಾಯಿಸಿದರು.
Close