ರಾತ್ರೋ ರಾತ್ರಿ ಶಬರಿಮಲೆಗೆ ಬಂದ ಮಹಿಳೆ ಅರೆಸ್ಟ್ : ಯಾರಾಕೆ..?
ಶಬರಿಮಲೆ ದೇಗುಲಕ್ಕೆ ತೆರಳುತ್ತಿದ್ದ ಮಹಿಳೆಯೋರ್ವರನ್ನು ರಾತ್ರೋ ರಾತ್ರಿ ಅರೆಸ್ಟ್ ಮಾಡಲಾಗಿದೆ. ಅಯ್ಯಪ್ಪ ದರ್ಶನಕ್ಕೆ ತೆರಳುತ್ತಿದ್ದ ಹಿಂದೂ ಐಕ್ಯ ವೇದಿಕೆ ಮುಖಂಡೆ ಶಶಿಕಲಾ ಟೀಚರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶಬರಿಮಲೆ : ಈಗಾಗಲೇ ದರ್ಶನಕ್ಕಾಗಿ ಅಯ್ಯಪ್ಪ ದೇಗುಲದ ಬಾಗಿಲನ್ನು ತೆರೆಯಲಾಗಿದ್ದು, ಮಹಿಳಾ ಭಕ್ತರು ಪ್ರವೇಶಿಸಲು ಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಭಾರೀ ಪ್ರತಿಭಟನೆ ನಡೆಸಲಾಗುತ್ತಿದೆ. ಅಲ್ಲದೇ ಶಬರಿಮಲೆಯ ಸುತ್ತ ಮುತ್ತ ಭಾರೀ ಭಿಗಿ ಭದ್ರತೆ ಒದಗಿಸಲಾಗಿದ್ದು 144 ಸೆಕ್ಷನ್ ಜಾರಿ ಮಾಡಲಾಗಿದೆ. ಇನ್ನೂ ಕೂಡ ಅನೇಕ ಮಹಿಳೆಯರು ದೇಗುಲಕ್ಕೆ ಪ್ರವೇಶಿಸಲು ಯತ್ನಿಸಬಹುದಾದ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭದ್ರತೆ ಕಲ್ಪಿಸಲಾಗಿದೆ.
ಶುಕ್ರವಾರ ರಾತ್ರಿ ಶಶಿಕಲಾ ಟೀಚರ್ ಎನ್ನುವ 56 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಶಬರಿಮಲೆ ಸಮೀಪದ ಮರಕೊಟ್ಟಂ ಬಳಿ ಶಶಿಕಲಾ ಟೀಚರ್ ಬಂಧನವಾಗಿದೆ. ಶಶಿಕಲಾ ಟೀಚರ್ ಹಿಂದೂ ಐಕ್ಯ ವೇದಿಕೆ ಅಧ್ಯಕ್ಷೆಯಾಗಿದ್ದು , ಆರ್ ಎಸ್ ಎಸ್ ನಾಯಕಿಯೂ ಕೂಡ ಆಗಿದ್ದಾರೆ.
ಅಯ್ಯಪ್ಪನ ದರ್ಶನಕ್ಕೆಂದು ಬರುತ್ತಿದ್ದ ವೇಳೆ ಮಧ್ಯರಾತ್ರಿ ಶಶಿಕಲಾ ಬಂಧನವಾಗಿದೆ. ಇರುಮುಡಿ ಹೊತ್ತು 10 ವರ್ಷದಿಂದ 50 ವರ್ಷದ ಒಳಗಿನ ಮಹಿಳೆಯರನ್ನು ಅಯ್ಯಪ್ಪ ದೇಗುಲಕ್ಕೆ ಬಿಡಬಾರದು ಎಂದು ಪ್ರತಿಭಟಿಸಲು ಶಶಿಕಲಾ ಟೀಚರ್ ಆಗಮಿಸುತ್ತಿದ್ದರು ಎನ್ನಲಾಗಿದೆ.
ಇರುಮುಡಿ ಹೊತ್ತು ಬರುತ್ತಿದ್ದ ಶಶಿಕಲಾ ರನ್ನು ಬಂಧಿಸಿದ್ದಕ್ಕೆ ಅಯ್ಯಪ್ಪ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ರೆಹನಾ ಫಾತೀಮಾಗೆ ಭದ್ರತೆ ನೀಡಿ, ಶಶಿಕಲಾರನ್ನು ಬಂಧಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಯ್ಯಪ್ಪ ದೇಗುಲಕ್ಕೆ ಪ್ರತಿಭಟನೆ ಸಲುವಾಗಿಯೇ ಬರುತ್ತಿದ್ದ ಅವರು ಸನ್ನಿದಿಗೆ 10 ರಿಂದ 50 ವರ್ಷದ ಮಹಿಳೆಯರು ಪ್ರವೇಶಿಸಿದರೆ ಕೇರಳವೇ ಸ್ಥಬ್ಧವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಶಶಿಕಲಾ ಟೀಚರ್ ಬಂಧನ ವಿರೋಧಿಸಿ ಶಬರಿಮಲೆ ಕರ್ಮ ಸಮಿತಿಯಿಂದ ಕೇರಳದಲ್ಲಿ ಹರತಾಳಕ್ಕೆ ಕರೆ ನೀಡಲಾಗಿದೆ. ಹಿಂದೂ ಸಂಘಟನೆಗಳಿಂದ 12 ಗಂಟೆ ಕೇರಳ ಬಂದ್ ಗೆ ಕರೆ ಕೊಡಲಾಗಿದೆ.