ಕೇರಳ ಕಾಂಗ್ರೆಸ್ ರಾಹುಲ್ ಗಾಂಧಿ ನಡುವೆ ಭಿನ್ನಾಭಿಪ್ರಾಯ
ಕೇರಳ ಕಾಂಗ್ರೆಸ್ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ಇದೀಗ ಭಿನ್ನಾಭಿಪ್ರಾಯ ಮೂಡಿದೆ. ಶಬರಿಮಲೆ ಮಹಿಳಾ ಪ್ರವೇಶ ವಿಚಾರಕ್ಕೆ ಭಿನ್ನಾಭಿಪ್ರಾಯ ಎದುರಾಗಿದೆ.
ಇಂದೋರ್/ತಿರುವನಂತಪುರ: ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ ಸುಪ್ರೀಂ ತೀರ್ಪನ್ನು, ಕೇರಳ ಕಾಂಗ್ರೆಸ್ ಘಟಕ ವಿರೋಧಿಸಿದ್ದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಒಂದೇ ವಿಷಯದ ಬಗ್ಗೆ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ಘಟಕಗಳ ನಡುವಿನ ಭಿನ್ನ ಅಭಿಪ್ರಾಯ ಇದೀಗ ಚರ್ಚೆ ಮತ್ತು ಟೀಕೆಗೆ ಗ್ರಾಸವಾಗಿದೆ.
ಮಂಗಳವಾರ ಮಧ್ಯಪ್ರದೇಶದ ಇಂದೋರ್ನಲ್ಲಿ ಮಾತನಾಡಿದ ರಾಹುಲ್, ಇದೊಂದು ಭಾವನಾತ್ಮಕ ವಿಚಾರವಾಗಿದ್ದು, ಶಬರಿಮಲೆಗೆ
ಮಹಿಳೆಯರಿಗೂ ಪ್ರವೇಶ ಕಲ್ಪಿಸಬೇಕು. ಆದರೆ ಇದು ನನ್ನ ವೈಯಕ್ತಿಕ ನಿಲುವು’ ಎಂದು ಹೇಳಿದ್ದಾರೆ.
ಆದರೆ ಕೇರಳ ಕಾಂಗ್ರೆಸ್ ಘಟಕ ಮಾತ್ರ ಈಗಲೂ ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ. ದೇಗುಲಕ್ಕೆ ಮಹಿಳೆಯರ ಪ್ರವೇಶ ಸಮರ್ಥಿಸಿಕೊಂಡರೆ ರಾಜ್ಯದ ಮತದಾರರ ಕೆಂಗಣ್ಣಿಗೆ ಗುರಿಯಾಗಬೇಕೆಂಬ ಭೀತಿ, ಕಾಂಗ್ರೆಸ್ ನಾಯಕರನ್ನು ಈಗಲೂ ಹಳೆಯ ನಿಲುವಿಗೆ ಅಂಟಿಕೊಳ್ಳುವಂತೆ ಮಾಡಿದೆ ಎನ್ನಲಾಗಿದೆ.