ತಿಮ್ಮಕ್ಕ ಬಗ್ಗೆ ವದಂತಿ : ಪೊಲೀಸರಿಗೆ ದೂರು
ಸಾಮಾಜಿಕ ಜಾಲತಾಣದಲ್ಲಿ ಸಾವಿನ ಸುದ್ದಿ ವರದಿ ಆಗುತ್ತಿರುವುದು ಇದೇ ಮೊದಲಲ್ಲ. ಮೊದಲು ಅಂಬರೀಷ್, ನಂತರ ಜಯಂತಿ, ಇದೀಗ ಸಾಲು ಮರದ ತಿಮ್ಮಕ್ಕ ಅವರ ಸುದ್ದಿಯೂ ವೈರಲ್ ಆಗಿತ್ತು. ಇಂಥ ಸುದ್ದಿಗಳನ್ನು ಶೇರ್ ಮಾಡಿಕೊಳ್ಳುವ ಮುನ್ನ ಕೌಂಟರ್ ಚೆಕ್ ಮಾಡಿಕೊಳ್ಳುವುದು ಪ್ರತಿಯೊಬ್ಬ ಪ್ರಜ್ಞಾವಂತರ ಕರ್ತವ್ಯ. ಪ್ರತಿಯೊಬ್ಬರನ್ನೂ ಎಚ್ಚರಿಸುವ ದೃಷ್ಟಿಯಿಂದ ತಿಮ್ಮಕ್ಕ ಅವರ ಸಾಕು ಮಗ ಇಂಥ ಸುದ್ದಿ ಹರಡುವವರು ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
ಬೆಂಗಳೂರು(ಮೇ.26): ಸಾಮಾಜಿಕ ಜಾಲತಾಣಗಳಲ್ಲಿ ಸಾಲು ಮರದ ತಿಮ್ಮಕ್ಕ ಸಾವಿನ ಬಗ್ಗೆ ವದಂತಿ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಿಗೆ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಅವರು ದೂರು ನೀಡಿದ್ದಾರೆ.
ಕಳೆದ ರಾತ್ರಿ ಕಿಡಿಗೇಡಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ಬೇರೆಯವರ ಮೃತದೇಹದ ಫೋಟೊ ಹಾಕಿ ಅವಮಾನ ಮಾಡಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಆಯುಕ್ತರ ಮೂಲಕ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.
ಈ ನಡುವೆ ಸ್ವತಃ ಸಾಲು ಮರದ ತಿಮ್ಮಕ್ಕ ಹೇಳಿಕೆ ನೀಡಿ 'ನಾನು ಇನ್ನೂ ಜೀವಂತವಾಗಿ ಇದ್ದೀನಿ. ಆದರೂ ಕೆಲವರು ನಾನು ಸಾವನ್ನಪ್ಪಿದ್ದೇನೆ ಅಂತಾ ಬರೆದಿದ್ದಾರೆ. ಕೆಲವರು ಫೋಟೋಗಳನ್ನು ಹಾಕಿದ್ದಾರೆ. ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರನ್ನು ಬಂಧಿಸಬೇಕು' ಎಂದು ತಿಳಿಸಿದ್ದಾರೆ.