ಕೇರಳ ಸಿಎಂ ತಲೆ ಕಡಿಯುವ ಹೇಳಿಕೆ: ಕ್ಷಮೆ ಕೋರಿದ ಚಂದ್ರಾವತ್
ಚಂದ್ರಾವತ್ ಹೇಳಿಕೆಯನ್ನು ಕಾಂಗ್ರೆಸ್, ಸಿಪಿಐ ಅಷ್ಟೇ ಅಲ್ಲದೆ, ಆರೆಸ್ಸೆಸ್ ಸಹ ಖಂಡಿಸಿತ್ತು.
ಉಜ್ಜಯಿನಿ(ಮಾ.03): ಕೇರಳದಲ್ಲಿ ಸುಮಾರು 300 ಅಮಾಯಕ ಆರೆಸ್ಸೆಸ್ ಕಾರ್ಯಕರ್ತರನ್ನು ಹತ್ಯೆ ಮಾಡಿದರೂ ಕುರುಡರಂತೆ ಕಣ್ಮುಚ್ಚಿ ಕುಳಿತಿರುವ ಮುಖ್ಯಮಂತ್ರಿ ಪಿಣರಾಯಿ ಅವರ ತಲೆ ಕಡಿದು ತಂದವರಿಗೆ ₹1 ಕೋಟಿ ಇನಾಮು ನೀಡುವುದಾಗಿ ಹೇಳಿ ತೀವ್ರ ವಿವಾದ ಸೃಷ್ಟಿಸಿದ್ದ ಆರೆಸ್ಸೆಸ್ ಮುಖಂಡ ಕುಂದನ್ ಚಂದ್ರಾವತ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ನಾನು ಈ ಹೇಳಿಕೆ ನೀಡಿದ ಬೆನ್ನಲ್ಲೇ ತಮ್ಮನ್ನು ಹತ್ಯೆ ಮಾಡುವುದಾಗಿ ಕೆಲವರು ಬೆದರಿಕೆ ಕರೆ ಮಾಡುತ್ತಿದ್ದಾರೆ. ಸಾಮಾಜಿಕ ತಾಣಗಳಲ್ಲೂ ತಮ್ಮನ್ನು ಗುರಿ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
‘ರಾಜ್ಯದಲ್ಲಿ ಸ್ವಯಂ ಸೇವಕರ ಮೇಲಿನ ದೌರ್ಜನ್ಯ ಮತ್ತು ಹತ್ಯೆ ಪ್ರಕರಣಗಳು ನನ್ನನ್ನು ಹೆಚ್ಚಾಗಿ ಭಾದಿಸಿವೆ. ಇದರಿಂದ ನಾನು ಭಾವೋದ್ವೇಗಕ್ಕೊಳಗಾಗಿ ಸಿಎಂ ವಿರುದ್ಧ ಹೇಳಿಕೆ ನೀಡಿದ್ದೇನೆ. ಅದರ ಬಗ್ಗೆ ನಾನು ವಿಷಾದಿಸುತ್ತೇನೆ,’ ಎಂಬ ಚಂದ್ರಾವತ್ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯ ಹಿಂದಿರುವ ಸಿಎಂ ಪಿಣರಾಯಿ ತಲೆ ಕಡಿಯುವವರಿಗೆ ಆಸ್ತಿ ಮಾರಾಟ ಮಾಡಿಯಾದರೂ, ₹1 ಕೋಟಿ ನೀಡುತ್ತೇನೆ ಎಂಬ ಚಂದ್ರಾವತ್ ಹೇಳಿಕೆಯನ್ನು ಕಾಂಗ್ರೆಸ್, ಸಿಪಿಐ ಅಷ್ಟೇ ಅಲ್ಲದೆ, ಆರೆಸ್ಸೆಸ್ ಸಹ ಖಂಡಿಸಿತ್ತು.