ತುಮಕೂರಿನ ಸಿದ್ಧಗಂಗಾ ಮಠದ ಶತಾಯುಷಿ ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನಾಚರಣೆಗೆ ಒಂದು ಕೋಟಿ ರು ಟೀಂ ಇಂಡಸ್ ತಂಡದ ಚಂದ್ರಯಾನ ಯೋಜನೆಗೆ 5 ಕೋಟಿ ರು

ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಠದ ಶತಾಯುಷಿ ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನಾಚರಣೆಗೆ ಒಂದು ಕೋಟಿ ರು., ಟೀಂ ಇಂಡಸ್ ತಂಡದ ಚಂದ್ರಯಾನ ಯೋಜನೆಗೆ 5 ಕೋಟಿ ರು., ಬಾಕಿ ವೈದ್ಯಕೀಯ ಪರಿಹಾರ ಬಿಲ್‌ಗಳ ಬಿಡುಗಡೆಗೆ 10 ಕೋಟಿ ರು. ನೀಡುವುದು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ವಿಷಯಗಳಿಗೆ ಮಂಗಳವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬರುವ ಏಪ್ರಿಲ್‌ಗೆ ಶ್ರೀಗಳು 111ನೇ ವಸಂತಕ್ಕೆ ಕಾಲಿಡಲಿದ್ದಾರೆ. ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿರುವ ಅವರ ಈ ಬಾರಿಯ ಹುಟ್ಟುಹಬ್ಬವನ್ನು ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲೂ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಒಂದು ಕೋಟಿ ರು. ಬಿಡುಗಡೆ ಮಾಡಬೇಕು ಎಂಬ ನಿರ್ಣಯವನ್ನು ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಸಭೆಯಲ್ಲಿ ಮಂಡಿಸಿದರು.

ಇದಕ್ಕೆ ಸಭೆಯ ಸರ್ವಾನುಮತದ ಅನುಮೋದನೆ ದೊರೆಯಿತು. ಅದೇ ರೀತಿ, ರಾಜಧಾನಿಯ ಟೀಮ್ ಇಂಡಸ್ ಖಾಸಗಿ ಸಂಸ್ಥೆ ಕೈಗೊಳ್ಳುತ್ತಿರುವ ಚಂದ್ರಯಾನ ಯೋಜನೆಗೆ ಐದು ಕೋಟಿ ರು. ನೆರವು ನೀಡಲು ಸಭೆ ಸಮ್ಮತಿಸಿತು.

ಚಂದ್ರನ ಅನ್ವೇಷಣೆಗೆ ಬಾಹ್ಯಾಕಾಶ ನೌಕೆ ಮತ್ತು ರೋವರ್ ಕಳುಹಿಸುವ ಖಾಸಗಿ ಸಂಸ್ಥೆಗಳ ಮೊದಲ ಪ್ರಯತ್ನದಲ್ಲಿ ಅಮೇರಿಕಾ ಸೇರಿದಂತೆ ವಿವಿಧ ದೇಶಗಳ ತಂಡಗಳ ಜತೆಗೆ ನಮ್ಮ ದೇಶದಿಂದ ಟೀಂ ಇಂಡಸ್ ಸಂಸ್ಥೆ ಆಯ್ಕೆಯಾಗಿದೆ. ಈ ತಂಡ ತಮ್ಮ ಆರ್ಥಿಕ ಸಮಸ್ಯೆಯನ್ನು ಹೇಳಿಕೊಂಡಿದೆ.

ಇದಕ್ಕೆ ಪಾಲಿಕೆ ಆರ್ಥಿಕ ನೆರವು ನೀಡುವ ಅಗತ್ಯವಿದೆ ಎಂದು ಆಡಳಿತ ಪಕ್ಷದ ಮಾಜಿ ನಾಯಕ ಮಹಮ್ಮದ್ ರಿಜ್ವಾನ್ ಹೇಳಿದರು. ಇದಕ್ಕೆ ಮೇಯರ್ ಅವರು ಒಪ್ಪಿಗೆ ನೀಡಿದರು.