ಬಂಡೀಪುರ ಅರಣ್ಯದಲ್ಲಿ ಐದು ಕಿ.ಮೀ ಮೇಲ್ಸೇತುವೆ
ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುವ ಸಂಬಂಧ ಕೇಂದ್ರ ಭೂಸಾರಿಗೆ ಇಲಾಖೆ ಸುಪ್ರೀಂ ಕೋರ್ಟ್ಗೆ ವರದಿ ನೀಡಿದೆ.
ನವದೆಹಲಿ: ಬಂಡಿಪುರದ ದಟ್ಟ ಕಾಡಿನ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 212 ರಲ್ಲಿ ತಲಾ ಒಂದು ಕಿ.ಮೀ. ಉದ್ದದ 5 ಎಲಿವೇಟೆಡ್ ಭಾಗಗಳನ್ನು ನಿರ್ಮಿಸಬೇಕು ಎಂದು ಕೇಂದ್ರ ಭೂಸಾರಿಗೆ ಇಲಾಖೆ ಸುಪ್ರೀಂ ಕೋರ್ಟ್ಗೆ ವರದಿ ನೀಡಿದೆ.
ಕಾಡುಪ್ರಾಣಿಗಳಿಗೆ ತೊಂದರೆ ಯಾಗಲಿದೆ ಎಂಬ ಹಿನ್ನೆಲೆಯಲ್ಲಿ 2010 ರಲ್ಲಿ ಈ ಹೆದ್ದಾರಿಯಲ್ಲಿ ಇರುಳು ವಾಹನ ಸಂಚಾರ ನಿಷೇಧಿಸಿ ರಾಜ್ಯ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕೇರಳ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು.
ಕರ್ನಾಟಕ ಸರ್ಕಾರದ ಈ ನಿಷೇಧವನ್ನು ರದ್ದು ಪಡಿಸಬೇಕು ಎಂಬುದು ಕೇರಳ ಸರ್ಕಾರದ ಒತ್ತಾಯವಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಹೆದ್ದಾರಿ ಇಲಾಖೆ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಗೆ ಸೂಚಿಸಿತ್ತು. ಇದೀಗ ಸಮಿತಿಯು ಸುಪ್ರೀಂ ಕೋರ್ಟ್ಗೆ ತನ್ನ ವರದಿ ಸಲ್ಲಿಸಿದ್ದು, ಎನ್ಎಚ್ 212 ರಲ್ಲಿ ಐದು ಎಲಿವೇಟೆಡ್ ಸೆಕ್ಷನ್ ನಿರ್ಮಿಸಬೇಕು ಎಂದು ಹೇಳಿದೆ.
ಆದರೆ ಯಾವ ಜಾಗದಲ್ಲಿ ಎಂದು ತಿಳಿಸಿಲ್ಲ. ಬಂಡಿಪುರದಲ್ಲಿ ರಾತ್ರಿ ವಾಹನಗಳ ಸಂಚಾರ ನಿಷೇಧಗೊಳ್ಳಬೇಕು ಎಂಬುದು ಕರ್ನಾಟಕ ಮತ್ತು ಪರಿಸರವಾದಿಗಳ ಸ್ಪಷ್ಟ ಅಭಿಪ್ರಾಯವಾಗಿದೆ. ಮುಂದಿನ ವಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.