ಸಹೋದ್ಯೋಗಿ ಹತ್ಯೆಗೆ ಸುಫಾರಿ ಕೊಟ್ಟ ಆರೋಪದಲ್ಲಿ ಸಿಸಿಬಿ ಗಾಳಕ್ಕೆ ಸಿಲುಕಿರುವ ರವಿ ಬೆಳಗೆರೆಗೆ ಇಂದು ನಿರ್ಣಾಯಕ ದಿನ. ಪೊಲೀಸ್​ ಕಸ್ಟಡಿ ಇಂದಿಗೆ ಅಂತ್ಯವಾಗಲಿದ್ದು, ಮಧ್ಯಾಹ್ನದ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಲಿದ್ದು ಕೋರ್ಟ್​​​​ ತೀರ್ಪು ಕುತೂಹಲ ಮೂಡಿಸಿದೆ.

ಬೆಂಗಳೂರು (ಡಿ.11):  ಸಹೋದ್ಯೋಗಿ ಹತ್ಯೆಗೆ ಸುಫಾರಿ ಕೊಟ್ಟ ಆರೋಪದಲ್ಲಿ ಸಿಸಿಬಿ ಗಾಳಕ್ಕೆ ಸಿಲುಕಿರುವ ರವಿ ಬೆಳಗೆರೆಗೆ ಇಂದು ನಿರ್ಣಾಯಕ ದಿನ. ಪೊಲೀಸ್​ ಕಸ್ಟಡಿ ಇಂದಿಗೆ ಅಂತ್ಯವಾಗಲಿದ್ದು, ಮಧ್ಯಾಹ್ನದ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಲಿದ್ದು ಕೋರ್ಟ್​​​​ ತೀರ್ಪು ಕುತೂಹಲ ಮೂಡಿಸಿದೆ.

ಪತ್ರಕರ್ತ ಸುನೀಲ್​ ಹೆಗ್ಗರವಳ್ಳಿ ಹತ್ಯೆಗೆ ಸುಫಾರಿ ನೀಡಿ ಸಿಕ್ಕಿ ಬಿದ್ದಿರುವ ರವಿಬೆಳಗೆರೆಯ ನಾಲ್ಕು ದಿನಗಳ ಪೊಲೀಸ್​ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ. ವಿಚಾರಣೆಯನ್ನು ಬಹುತೇಕ ಮುಗಿಸಿರುವ ಸಿಸಿಬಿ ಅಧಿಕಾರಿಗಳು ಇಂದು ಮಧ್ಯಾಹ್ನ 1ನೇ ಎಸಿಎಂಎಂ ಕೋರ್ಟ್​ಮುಂದೆ ಬೆಳೆಗೆರೆ ಅವರನ್ನು ಹಾಜರು ಪಡಿಸಲಿದ್ದಾರೆ. ಈಗಾಗಲೇ ರವಿ ಬೆಳಗೆರೆ ವರ್ತನೆಯಿಂದ ರೋಸಿ ಹೋಗಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ. ಇದೇ ವೇಳೆ ಬೆಳಗೆರೆ ಪರ ವಕೀಲ ದಿವಾಕರ್​ ಬೇಲ್​ ಅರ್ಜಿ ಸಿದ್ದಪಡಿಸಿಕೊಂಡಿದ್ದು, ಅನಾರೋಗ್ಯ ಕಾರಣದಿಂದ ಬೇಲ್​ ನೀಡುವಂತೆ ವಾದ ಮಂಡಿಸಲಿದ್ದಾರೆ. ಮತ್ತೊಂದೆಡೆ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಬೇಲ್​​ ನೀಡಬಾರದು ಎಂದು ಸಿಸಿಬಿ ಅಧಿಕಾರಿಗಳು ವಾದಿಸಲು ಸಿದ್ದತೆ ನಡೆಸಿದ್ದಾರೆ. ಹೀಗಾಗಿ ಕೋರ್ಟ್​​ ತೀರ್ಪು ಭಾರೀ ಕುತೂಹಲ ಮೂಡಿಸಿದೆ.

ಸದ್ಯಕ್ಕೆ ಸಿಸಿಬಿ ಪೊಲೀಸರಿಗೆ ಸಿಕ್ಕ ಮಾಹಿತಿ ಆಧರಿಸಿ ಹೇಳಿಕೆಗಳನ್ನ ಪಡೆಯಲಾಗಿದೆ. ನಿನ್ನೆ ಸಂಜೆಯವರೆಗೂ ಯಶೋಮತಿ ಹೇಳಿಕೆ ದಾಖಲಿಸಿದ್ದು, ಯಶೋಮತಿ ನೀಡಿರುವ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳಿಗಳು ಕ್ರಾಸ್​ಕ್ವೆಷ್ಚನ್​​ ಸಿದ್ದಪಡಿಸಿಕೊಂಡಿದ್ದಾರೆ. ಜೊತೆಗೆ ವಿಜಯಪುರದಲ್ಲಿ ವಿಜು ಬಡೇಗರ್​ ಕುರಿತಾಗಿ ಸಾಕಷ್ಟು ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಹೀಗಾಗಿ ಮಧ್ಯಾಹ್ನ ಎಸಿಎಂಎಂ ಕೋರ್ಟ್​ ಮುಂದೆ ರವಿ ಬೆಳೆಗೆರೆ ಅವರನ್ನು ಹಾಜರುಪಡಿಸುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.

ಆರೋಪಿ ರವಿ ಬೆಳಗೆರೆ ಪ್ರಭಾವಿಯಾಗಿದ್ದು, ಜಾಮೀನು ನೀಡಿದರೆ ಸಾಕ್ಷ್ಯ ಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಪ್ರಮುಖ ವಾದ ಮಂಡಿಸಲಿದ್ದಾರೆ. ಪ್ರಕರಣ ಸೂಕ್ಷ್ಮ ಹಾಗೂ ಗಂಭೀರ ಸ್ವರೂಪದ್ದಾಗಿದ್ದು ಬೇಲ್​ ನೀಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಬಹುದು. ಅಥವ ಒಂದು ವೇಳೆ ಜಾಮೀನು ಅರ್ಜಿ ಸಂಬಂಧ ವಿಸ್ತೃತ ವಿಚಾರಣೆ ಅಗತ್ಯ ಇದೆ ಎಂದು ನ್ಯಾಯಾಧಿಶರು ನಿರ್ಧರಿಸಿದ್ದಲ್ಲಿ ರವಿ ಬೆಳೆಗೆರೆಗೆ ನ್ಯಾಯಾಂಗ ಬಂಧನ ಖಚಿತ ಎನ್ನಲಾಗಿದೆ.