ಶ್ರೀರಾಮ, ಸೀತೆ ಕೂಡ ಗೋಮಾಂಸ ತಿನ್ನುತ್ತಿದ್ದರು
- ರಾಮ-ಸೀತೆ ಕೂಡ ಗೋಮಾಂಸ ಸೇವಿಸುತ್ತಿದ್ದರು ಎಂದು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲಿದೆ
- ಆಹಾರ ಸಂಸ್ಕೃತಿ ಪ್ರಶ್ನಿಸುವ ಹಕ್ಕು ಯಾರಿಗೂ ನೀಡಿಲ್ಲ. ಪೂರ್ವಜ ಋಷಿಮುನಿಗಳೂ ಗೋಮಾಂಸ ತಿನ್ನುತ್ತಿದ್ದರು.
ಬಳ್ಳಾರಿ: ರಾಮ-ಸೀತೆ ಕೂಡ ಗೋಮಾಂಸ ಸೇವಿಸುತ್ತಿದ್ದರು ಎಂದು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲಿದೆ. ಆಹಾರ ಸಂಸ್ಕೃತಿಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಯಜ್ಞ-ಯಾಗಾದಿಗಳಲ್ಲೂ ಗೋಮಾಂಸ ಭಕ್ಷಣೆ ಇತ್ತು. ಆದರೆ, ಆರೆಸ್ಸೆಸ್ ಹಿಡಿತದಲ್ಲಿರುವ ಬಿಜೆಪಿಯವರು ರಾಜಕೀಯ ಹಿತಾಸಕ್ತಿಗಾಗಿ ಸಾಂಸ್ಕೃತಿಕ ಸರ್ವಾಧಿಕಾರ ನಡೆಸುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಬಂದೊದಗಿದ ಬಹುದೊಡ್ಡ ಅಪಾಯ ಎಂದು ನಿಡುಮಾಮಿಡಿ ವೀರಭದ್ರಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.
ಸೌಹಾರ್ದಕ್ಕಾಗಿ ಕರ್ನಾಟಕ ಸಮಿತಿಯಿಂದ ಜ.30ರಂದು ಹಮ್ಮಿಕೊಂಡಿರುವ ರಾಜ್ಯಾದ್ಯಂತ ಮಾನವ ಸರಪಳಿ ಆಂದೋಲನ ಅಂಗವಾಗಿ ಇಲ್ಲಿನ ರಾಘವಕಲಾ ಮಂದಿ ರದಲ್ಲಿ ಜರುಗಿದ ಪೂರ್ವ ಸಿದ್ಧತಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಆಹಾರ ಸಂಸ್ಕೃತಿ ಪ್ರಶ್ನಿಸುವ ಹಕ್ಕು ಯಾರಿಗೂ ನೀಡಿಲ್ಲ. ಪೂರ್ವಜ ಋಷಿಮುನಿಗಳೂ ಗೋಮಾಂಸ ತಿನ್ನುತ್ತಿದ್ದರು. ಆಗ ತಿನ್ನುತ್ತಿದ್ದವರು ಮಾತ್ರ ಪೂಜ್ಯರು, ಈಗಿನವರು ತ್ಯಾಜ್ಯರು ಹೇಗಾಗುತ್ತಾರೆ ಎಂದರು.
ಈ ಹಿಂದೆ, ಎಲ್ಲಾ ಶಿವಭಕ್ತರು ಹಿಂದೂಗಳಲ್ಲ ಎಂಬ ವಿಭಿನ್ನ ತರ್ಕವನ್ನು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಪ್ರತಿಪಾದಿಸಿದ್ದರು.