ಮಂದಿರ ಅಯೋಧ್ಯೆಯಲ್ಲೇ ಹೊರತು ಹೈದರಾಬಾದ್ನಲ್ಲಿ ಅಲ್ಲ: ಶಿವಸೇನೆ!
ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಗೆ ಕಾರಣವಾದ ರಾಮ ಮಂದಿರ ವಿವಾದ! ರಾಮ ಮಂದಿರ ನಿರ್ಮಾಣ ಅಯೋಧ್ಯೆಯಲ್ಲಿ ಹೊರತು ಹೈದರಾಬಾದ್ನಲ್ಲಿ ಅಲ್ಲ! ಒವೈಸಿಗೆ ತಿರುಗೇಟು ನೀಡಿದ ಶಿವಸೇನೆ ನಾಯಕ ಸಂಜಯ್ ರಾವುತ್! ಮಂದಿರ ನಿರ್ಮಾಣ ಕುರಿತು ಒವೈಸಿ ನೀಡಿದ್ದ ಹೇಳಿಕೆಗೆ ಶಿವಸೇನೆ ಗರಂ
ಮುಂಬೈ(ಅ.20): ರಾಮಮಂದಿರ ನಿರ್ಮಾಣದ ಸಂಬಂಧ ರಾಜಕೀಯ ಪಕ್ಷಗಳ ನಡುವಿನ ಹೇಳಿಕೆ ಪ್ರತಿಕ್ರಿಯೆಗಳ ಭರಾಟೆ ಹೆಚ್ಚುತ್ತಿದ್ದು, ಮಂದಿರ ನಿರ್ಮಾಣದ ಬಗ್ಗೆ ಹೇಳಿಕೆ ನೀಡಿದ್ದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿಗೆ ಶಿವಸೇನೆ ಪ್ರತಿಕ್ರಿಯೆ ನೀಡಿದೆ.
ರಾಮ ಮಂದಿರ ನಿರ್ಮಾಣ ಮಾಡುತ್ತಿರುವುದು ಅಯೋಧ್ಯೆಯಲ್ಲಿಯೇ ಹೊರತು ಹೈದರಾಬಾದ್, ಪಾಕಿಸ್ತಾನ ಅಥವಾ ಇರಾನ್ನಲ್ಲಿ ಅಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಒವೈಸಿಗೆ ತಿರುತೇಟು ನೀಡಿದ್ದಾರೆ.
ಓವೈಸಿಯಂತಹ ರಾಜಕಾರಣಿಗಳು ಮುಸ್ಲಿಂ ಸಮುದಾಯವನ್ನು ತಪ್ಪು ದಾರಿಗೆ ಎಳೆಯುತ್ತಿದ್ದು, ಭವಿಷ್ಯದಲ್ಲಿ ಇದು ಅಪಾರ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಎಂದು ಸಂಜಯ್ ಎಚ್ಚರಿಕೆ ನೀಡಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೊಳಿಸಬೇಕು. ಕಾನೂನು ಜಾರಿಯಾಗದೇ ರಾಮಮಂದಿರ ನಿರ್ಮಾಣ ಸಾಧ್ಯವಿಲ್ಲ. 2019 ರ ಚುನವಾಣೆ ಫಲಿತಾಂಶದ ಬಗ್ಗೆ ಸ್ಪಷ್ಟತೆ ಇಲ್ಲ. ಬಹುಮತವಿದ್ದಾಗಲೇ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂದು ರಾವುತ್ ಅಭಿಪ್ರಾಯಪಟ್ಟಿದ್ದಾರೆ.
ವಿಜಯದಶಮಿಯಂದು ಭಾಷಣ ಮಾಡಿದ್ದ ಮೋಹನ್ ಭಾಗವತ್ ದೇಶದ ಆತ್ಮಗೌರವಕ್ಕಾಗಿ ರಾಮಮಂದಿರ ನಿರ್ಮಾಣ ಅನಿವಾರ್ಯ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಒವೈಸಿ ರಾಮಮಂದಿರ ಕಟ್ಟದಂತೆ ನಿಮ್ಮನ್ನು ಯಾರು ತಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು.