ರಾಜ್ಯಸಭೆಗೆ ಕಾಂಗ್ರೆಸ್ ಮೂರನೇ ಟಿಕೆಟ್ ಕಗ್ಗಂಟು
ರಾಜ್ಯಸಭಾ ಚುನಾವಣೆಗೆ ಸೀಮಿತವಾದಂತೆ ಜೆಡಿಎಸ್ ಮೈತ್ರಿ ಬೇಡ ಹಾಗೂ ಚುನಾವಣೆ ಸಾಮಿಪ್ಯದ ಹಿನ್ನೆಲೆಯಲ್ಲಿ ಹೊರಗಿನವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವುದು ಬೇಡ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಗಿಪಟ್ಟಿನಿಂದಾಗಿ ಕಾಂಗ್ರೆಸ್ನ ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕತ್ವದಿಂದ ಅರ್ಹರ ಪಟ್ಟಿಪಡೆದಿರುವ ಹೈಕಮಾಂಡ್ ಪರಿಶೀಲನೆ ನಡೆಸಿ ಹೆಸರು ಅಂತಿಮಗೊಳಿಸುವುದಾಗಿ ಸೂಚಿಸಿದೆ ಎಂದು ತಿಳಿದುಬಂದಿದೆ.
ನವದೆಹಲಿ : ರಾಜ್ಯಸಭಾ ಚುನಾವಣೆಗೆ ಸೀಮಿತವಾದಂತೆ ಜೆಡಿಎಸ್ ಮೈತ್ರಿ ಬೇಡ ಹಾಗೂ ಚುನಾವಣೆ ಸಾಮಿಪ್ಯದ ಹಿನ್ನೆಲೆಯಲ್ಲಿ ಹೊರಗಿನವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವುದು ಬೇಡ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಗಿಪಟ್ಟಿನಿಂದಾಗಿ ಕಾಂಗ್ರೆಸ್ನ ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕತ್ವದಿಂದ ಅರ್ಹರ ಪಟ್ಟಿಪಡೆದಿರುವ ಹೈಕಮಾಂಡ್ ಪರಿಶೀಲನೆ ನಡೆಸಿ ಹೆಸರು ಅಂತಿಮಗೊಳಿಸುವುದಾಗಿ ಸೂಚಿಸಿದೆ ಎಂದು ತಿಳಿದುಬಂದಿದೆ.
ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಬಗ್ಗೆ ತಮ್ಮ ನಿಲುವು ತಿಳಿಸಲು ಹಾಗೂ ಪಟ್ಟಿ ಅಖೈರುಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ದೆಹಲಿಯಲ್ಲಿ ಮಂಗಳವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಸಿದರು. ಇದಾದ ನಂತರ ರಾಜ್ಯ ನಾಯಕರಿಬ್ಬರೂ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಸಭೆಗೆ ಪಕ್ಷದಿಂದ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು. ಈ ಚುನಾವಣೆಗೆ ಸೀಮಿತವಾದಂತೆ ಜೆಡಿಎಸ್ ಜತೆ ಮೈತ್ರಿಯ ಅಗತ್ಯವಿಲ್ಲ.
ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂಬ ಆ ಪಕ್ಷದ ಒತ್ತಾಯವನ್ನು ಪರಿಗಣಿಸಬೇಕಿಲ್ಲ ಎಂದು ವಾದಿಸಿದರು ಎನ್ನಲಾಗಿದೆ. ಆದರೆ, ಜಾತ್ಯತೀತ ಪಕ್ಷಗಳನ್ನು ಈ ರೀತಿ ದೂರ ತಳ್ಳುವ ಮುನ್ನ ಈ ಬಗ್ಗೆ ಮರುಪರಿಶೀಲನೆ ನಡೆಸುವ ಅಗತ್ಯವಿದೆ ಎಂಬ ಕಾರಣಕ್ಕೆ ಈ ಬಗ್ಗೆ ನಿರ್ಧಾರವನ್ನು ಹೈಕಮಾಂಡ್ ಪ್ರಕಟಿಸಲಿಲ್ಲ ಎಂದು ಮೂಲಗಳು ಹೇಳಿವೆ.
ಅಲ್ಲದೆ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ತಂತ್ರಗಾರಿಕೆ ರೂಪಿಸಲು ಕಾಂಗ್ರೆಸ್ಗೆ ಅಗತ್ಯವಿರುವ ಸ್ಯಾಮ್ ಪಿತ್ರೋಡಾ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸೂಚಿಸಿದೆ ಎನ್ನಲಾಗಿದೆ.
ಆದರೆ, ರಾಜ್ಯ ಚುನಾವಣೆ ದೃಷ್ಟಿಯಿಂದ ಹೊರಗಿನವರ ಬದಲಾಗಿ ರಾಜ್ಯದವರಿಗೇ ರಾಜ್ಯಸಭೆಯ ನೀಡಿದರೆ ಉತ್ತಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಹೇಳಿದರು ಎನ್ನಲಾಗಿದೆ. ಹೀಗಾಗಿ, ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗಿಲ್ಲ. ರಾಹುಲ್ ಗಾಂಧಿ ಅವರೊಂದಿಗಿನ ಸಭೆಯ ನಂತರ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಸುದೀರ್ಘ ಕಾಲ ಚರ್ಚೆ ನಡೆಸಿ ಅಂತಿಮವಾಗಿ ರಾಜ್ಯ ನಾಯಕತ್ವವು ರಾಜ್ಯಸಭೆಗೆ ತಾವು ಸೂಚಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ಗೆ ನೀಡಿದೆ ಎಂದು ಮೂಲಗಳು ಹೇಳಿವೆ.
ಟಕೆಟ್ ಕೇಳಿರುವುದು ಯಾರಿಗೆ?
ರಾಜ್ಯ ನಾಯಕತ್ವ ನೀಡಿರುವ ಪಟ್ಟಿಯ ಪ್ರಕಾರ ಮುಸ್ಲಿಂ ಕೋಟಾದಡಿ ಮೊದಲಿಗೆ ರೋಷನ್ ಬೇಗ್ ಹಾಗೂ ಸಲೀಂ ಅಹಮದ್ ಅವರಿಬ್ಬರ ಪೈಕಿ ಒಬ್ಬರಿಗೆ ನೀಡುವಂತೆ ರಾಜ್ಯ ನಾಯಕರು ಸೂಚಿಸಿದ್ದಾರೆ. ಆದರೆ, ಹೈಕಮಾಂಡ್ ಇನ್ನೂ ರೆಹಮಾನ್ ಖಾನ್ ಅವರನ್ನು ಈ ಪಟ್ಟಿಯಲ್ಲಿ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಎರಡನೇ ಅಭ್ಯರ್ಥಿಯನ್ನು ಲಿಂಗಾಯತ ಕೋಟಾದಿಂದ ಆಯ್ಕೆ ಮಾಡಬೇಕೋ ಅಥವಾ ಮಹಿಳಾ ಕೋಟಾದಿಂದ ಮಾಡಬೇಕೋ ಎಂಬ ಬಗ್ಗೆ ಗೊಂದಲದಲ್ಲಿರುವ ರಾಜ್ಯ ನಾಯಕತ್ವ ಈ ಎರಡು ಕೋಟಾಗಳಿಗೂ ಕೆಲ ಹೆಸರುಗಳನ್ನು ಸೂಚಿಸಿ ಅಂತಿಮ ನಿರ್ಧಾರವನ್ನು ಹೈಕಮಾಂಡ್ಗೆ ಬಿಟ್ಟಿದೆ ಎನ್ನಲಾಗಿದೆ.
ಅದರ ಪ್ರಕಾರ ಲಿಂಗಾಯತ ಕೋಟಾದಡಿ ಕೈಲಾಸ್ನಾಥ್ ಪಾಟೀಲ್, ಶಿವರಾಜ ಪಾಟೀಲ್, ಎ.ಬಿ. ಮಾಲಕರೆಡ್ಡಿ, ಶಾಮನೂರು ಶಿವಶಂಕರಪ್ಪ ಅವರ ಹೆಸರಿದೆ. ಇನ್ನು ಮಹಿಳಾ ಕೋಟಾದಡಿ ರಾಣಿ ಸತೀಶ್ ಹೆಸರು ಪ್ರಧಾನವಾಗಿ ಕೇಳಿ ಬಂದಿದೆ ಎನ್ನಲಾಗಿದೆ. ಮೂರನೇ ಅಭ್ಯರ್ಥಿಯಾಗಿ ಚೆನ್ನಾರೆಡ್ಡಿ ಹಾಗೂ ವೀರರೆಡ್ಡಿ ಅವರ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ.
ಆದರೆ, ರಾಷ್ಟ್ರೀಯ ಮಟ್ಟದಲ್ಲಿ ತಂತ್ರಗಾರಿಕೆ ರೂಪಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸ್ಯಾಮ್ ಪಿತ್ರೋಡಾ ಹಾಗೂ ಜನಾರ್ದನ ದ್ವಿವೇದಿ ಅವರ ಹೆಸರನ್ನು ರಾಜ್ಯಸಭೆಗೆ ಪರಿಗಣಿಸುತ್ತಿದೆ ಎನ್ನಲಾಗಿದೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಸ್ಯಾಮ್ ಪಿತ್ರೋಡಾ ಅವರನ್ನು ರಾಜ್ಯಸಭೆಗೆ ಕಳುಹಿಸುವುದು ಹೈಕಮಾಂಡ್ಗೆ ಅತ್ಯಗತ್ಯವಾಗಿ ಬೇಕಿದೆ. ಇದಕ್ಕೆ ಇರುವ ರಹದಾರಿ ಕರ್ನಾಟಕ ಹಾಗೂ ಗುಜರಾತ್ನ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಬಹುದಾದ ಸ್ಥಾನಗಳು.
ಗುಜರಾತ್ ಹಾಗೂ ಕರ್ನಾಟಕದಿಂದ ತಲಾ ಒಬ್ಬರನ್ನು ರಾಜ್ಯಸಭೆಗೆ ಕಳುಹಿಸುವ ಮನಸ್ಥಿತಿಯಲ್ಲಿ ಹೈಕಮಾಂಡ್ ಇದೆ. ಆದರೆ, ರಾಜ್ಯ ವಿಧಾನಸಭಾ ಚುನಾವಣೆ ಅತ್ಯಂತ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಹಾಗೂ ಸಿದ್ದರಾಮಯ್ಯ ನೇರವಾಗಿ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸ್ಯಾಮ್ ಪಿತ್ರೋಡಾ ಅವರನ್ನು ಕರ್ನಾಟಕದಿಂದ ಪರಿಗಣಿಸಬೇಕೋ ಅಥವಾ ಗುಜರಾತಿನಿಂದ ಪರಿಗಣಿಸಬೇಕೋ ಎಂಬ ಗೊಂದಲದಲ್ಲಿ ಹೈಕಮಾಂಡ್ ಇದೆ. ಹೀಗಾಗಿ ಈ ಬಗ್ಗೆ ಅನಂತರ ನಿರ್ಧರಿಸುವ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.
ಆದರೆ, ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಹಾಗೂ ಸ್ಯಾಮ್ ಪಿತ್ರೋಡಾ ಅವರ ಹೆಸರನ್ನು ಹೈಕಮಾಂಡ್ ಸೂಚಿಸಿದೆ ಎಂಬುದನ್ನು ತಳ್ಳಿಹಾಕಿದರು. ನಾವು ಕರ್ನಾಟಕದವರ ಹೆಸರನ್ನು ಮಾತ್ರ ಹೈಕಮಾಂಡ್ಗೆ ನೀಡಿದ್ದೇವೆ. ಕರ್ನಾಟಕೇತರ ವ್ಯಕ್ತಿಗಳ ಚರ್ಚೆಯೇ ನಡೆದಿಲ್ಲ. ಸ್ಯಾಮ್ ಪಿತ್ರೋಡಾ ಅವರ ಬಗ್ಗೆಯಂತೂ ಚರ್ಚೆಯೇ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.