ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಕೊಟ್ಟ ಖಡಕ್ ಸೂಚನೆ
ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗುವಂತಹ ನಡವಳಿಕೆ ತೋರದಂತೆ ಕಾಂಗ್ರೆಸ್ ಶಾಸಕರನ್ನು ನಿಯಂತ್ರಿಸಿ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ನ ರಾಜ್ಯ ನಾಯಕತ್ವಕ್ಕೆ ತಾಕೀತು ಮಾಡಿದ್ದಾರೆ.
ನವದೆಹಲಿ : ‘ಲೋಕಸಭೆ ಚುನಾವಣೆ ಸಮೀಪಿಸಿರುವ ಈ ಹಂತದಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾದರೆ ಹಾಗೂ ಜೆಡಿಎಸ್ ಜತೆಗಿನ ಮೈತ್ರಿಗೆ ಧಕ್ಕೆಯಾದರೆ ದೇಶಾದ್ಯಂತ ಕಾಂಗ್ರೆಸ್ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗುವಂತಹ ನಡವಳಿಕೆ ತೋರದಂತೆ ಕಾಂಗ್ರೆಸ್ ಶಾಸಕರನ್ನು ನಿಯಂತ್ರಿಸಿ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ನ ರಾಜ್ಯ ನಾಯಕತ್ವಕ್ಕೆ ತಾಕೀತು ಮಾಡಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಹೊಂದಾಣಿಕೆ ಕೊರತೆ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ದೆಹಲಿಗೆ ಕರೆಸಿಕೊಂಡ ರಾಹುಲ್ ಗಾಂಧಿ ಅವರು ಈ ತಾಕೀತು ನೀಡಿದರು ಎಂದು ಮೂಲಗಳು ತಿಳಿಸಿವೆ.
‘ವೈಯಕ್ತಿಕ ಒತ್ತಡಗಳು ಏನೇ ಇದ್ದರೂ ಮೈತ್ರಿಗೆ ಧಕ್ಕೆಯಾಗುವಂತಹ ಹೇಳಿಕೆಗಳನ್ನು ಯಾರೂ ನೀಡಬಾರದು. ಈ ವಿಷಯವನ್ನು ಕಾಂಗ್ರೆಸ್ ಶಾಸಕರಿಗೆ ಸ್ಪಷ್ಟಪಡಿಸಿ. ಇದಾದ ನಂತರವೂ ಯಾರಾದರೂ ಮೈತ್ರಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ಗೆ ಸೂಚಿಸಿದರು ಎನ್ನಲಾಗಿದೆ.
‘ಲೋಕಸಭೆ ಚುನಾವಣೆ ಈ ಹಂತದಲ್ಲಿ ಜೆಡಿಎಸ್ ಜತೆ ಮೈತ್ರಿಯನ್ನು ಕಾಂಗ್ರೆಸ್ ಕಡಿದುಕೊಂಡರೆ ಅದು ದೇಶಾದ್ಯಂತ ಪಕ್ಷದ ಮೇಲೆ ಕೆಟ್ಟಪರಿಣಾಮ ಬೀರುತ್ತದೆ. ಈ ಸೂಕ್ಷ್ಮವನ್ನು ಶಾಸಕರು ಅರಿತುಕೊಳ್ಳಬೇಕು. ಕ್ಷೇತ್ರದ ಕೆಲಸ ಹಾಗೂ ವರ್ಗಾವಣೆ ಸೇರಿದಂತೆ ಯಾವುದೇ ದೂರುಗಳಿದ್ದರೂ ಅದು ಪಕ್ಷದ ಮಟ್ಟದಲ್ಲಿ ಚರ್ಚೆಯಾಗಲಿ. ಬಹಿರಂಗವಾಗಿ ಯಾರೂ ಹೇಳಿಕೆ ನೀಡದಂತೆ ಶಾಸಕರಿಗೆ ಸ್ಪಷ್ಟವಾಗಿ ತಿಳಿಸಿ’ ಎಂದು ಅವರು ಹೇಳಿದರು ಎಂದು ಮೂಲಗಳು ಹೇಳಿವೆ.
ಸಿದ್ದು ಸಮಜಾಯಿಷಿ:
ಈ ವೇಳೆ ಸಿದ್ದರಾಮಯ್ಯ ಅವರು, ಕ್ಷೇತ್ರದ ಅಭಿವೃದ್ಧಿ ಹಾಗೂ ವರ್ಗಾವಣೆ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದರಿಂದ ಒತ್ತಡಕ್ಕೆ ಒಳಗಾಗಿ ಪಕ್ಷದ ಕೆಲ ಶಾಸಕರು ಅಸಮಾಧಾನ ತೋರ್ಪಡಿಸಿರಬಹುದು. ಆದರೆ, ಸಮ್ಮಿಶ್ರ ಸರ್ಕಾರವನ್ನು ಸಂಕಷ್ಟಕ್ಕೆ ದೂಡುವಂತಹ ನಡವಳಿಕೆಯನ್ನು ಕಾಂಗ್ರೆಸ್ ಶಾಸಕರು ತೋರಿಲ್ಲ. ಬಿಜೆಪಿಯ ಆಪರೇಷನ್ ಕಮಲದ ಪರಿಣಾಮವಾಗಿ ಸರ್ಕಾರಕ್ಕೆ ಸಂಕಷ್ಟಉಂಟಾದರೆ ಅದರ ಹೊಣೆಯನ್ನು ಕಾಂಗ್ರೆಸ್ ಮೇಲೆ ಹಾಕಲು ಜೆಡಿಎಸ್ ನಾಯಕತ್ವ ಈ ವಿಚಾರವನ್ನು ದೊಡ್ಡದು ಮಾಡುತ್ತಿದೆ ಎಂದು ಸಮಜಾಯಿಷಿ ನೀಡಿದರು ಎಂದು ಮೂಲಗಳು ಹೇಳಿವೆ.
ಕೆಲ ಶಾಸಕರು ತಮ್ಮ ಕ್ಷೇತ್ರದ ಕೆಲಸ ಕಾರ್ಯಗಳು ನಡೆಯದ ಬಗ್ಗೆ ಕೆಲ ಶಾಸಕರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರಬಹುದು. ಆದರೆ, ಇದನ್ನು ಜೆಡಿಎಸ್ ನಾಯಕರು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಇಷ್ಟಕ್ಕೂ ಈ ಶಾಸಕರು ಸಮ್ಮಿಶ್ರ ಸರ್ಕಾರವನ್ನಾಗಲಿ ಅಥವಾ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನೇರವಾಗಿ ಟೀಕಿಸಿಲ್ಲ. ಇನ್ನು ತಾವು ಸೇರಿದಂತೆ ಕಾಂಗ್ರೆಸ್ನ ಯಾವೊಬ್ಬ ಪ್ರಮುಖ ನಾಯಕರು ಸರ್ಕಾರದ ವಿರುದ್ಧ ಒಂದು ಹೇಳಿಕೆಯನ್ನು ನೀಡಿಲ್ಲ. ವಾಸ್ತವವಾಗಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ನಡೆದಿದೆ. ಹೀಗಾಗಿ, ಶಾಸಕರಲ್ಲಿ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಅಸಮಾಧಾನವಿದೆ. ಆದರೆ, ಅತೃಪ್ತ ಶಾಸಕರನ್ನು ಹೊರತು ಪಡಿಸಿ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗುವಂತಹ ನಡವಳಿಕೆಯನ್ನು ತೋರಿಲ್ಲ’ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು ಎನ್ನಲಾಗಿದೆ.
ಮೈತ್ರಿ ಬಗ್ಗೆ ಚರ್ಚೆ:
ಇದಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಲು 10 ರಿಂದ 12 ಸೀಟಿನ ಬೇಡಿಕೆ ಇಟ್ಟಿರುವ ಜೆಡಿಎಸ್ ಪಟ್ಟಿಗೆ ಯಾವ ರೀತಿಯ ತಂತ್ರಗಾರಿಕೆ ರೂಪಿಸಬೇಕು ಎಂಬ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆ ನಡೆಯಿತು ಎನ್ನಲಾಗಿದೆ.
ದೆಹಲಿಯಲ್ಲಿನ ರಾಹುಲ್ ಗಾಂಧಿ ನಿವಾಸದಲ್ಲಿ ಸುಮಾರು 45 ನಿಮಿಷಗಳ ಕಾಲ ಕಾಂಗ್ರೆಸ್ನ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಮ್ಮುಖದಲ್ಲಿ ಈ ಸಭೆ ನಡೆದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿನ 28 ಸೀಟುಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಹಂಚಿಕೆ ನಡೆಸಲು ಅನುಸರಿಸಬೇಕಾದ ಸೂತ್ರಗಳ ಬಗ್ಗೆಯೂ ರಾಹುಲ್ ಗಾಂಧಿಯ ಜೊತೆ ಪ್ರಾಥಮಿಕ ಹಂತದ ಚರ್ಚೆ ನಡೆಸಲಾಗಿದೆ. ಸದ್ಯ ತಾನು ಹೊಂದಿರುವ ಲೋಕಸಭಾ ಸ್ಥಾನಗಳನ್ನು ಜೆಡಿಎಸ್ಗೆ ಬಿಟ್ಟುಕೊಡಬಾರದು ಎಂಬ ಇಂಗಿತವನ್ನು ರಾಜ್ಯದ ನಾಯಕರು ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಸೀಟು ಹಂಚಿಕೆ ಮತ್ತು ಕ್ಷೇತ್ರಾವಾರು ಹಂಚಿಕೆ ಬಗ್ಗೆಯೂ ಹೈಕಮಾಂಡ್ ತನ್ನ ನಿಲುವನ್ನು ತಿಳಿಸಬೇಕು ಎಂದು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ರಾಹುಲ್ ಗಾಂಧಿ ಅವರನ್ನು ಕೋರಿದ್ದಾರೆ. ಹಾಗೆಯೇ ಮುಂದಿನ ಸಭೆಯನ್ನು ಜೆಡಿಎಸ್ ವರಿಷ್ಠ ದೇವೇಗೌಡ ಅವರೊಂದಿಗೆ ನಡೆಸಿದರೆ ಒಳಿತು ಎಂಬ ಸಲಹೆಯನ್ನು ಸಿದ್ದರಾಮಯ್ಯ ಅವರು ರಾಹುಲ… ಗಾಂಧಿ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.