ಕಾಂಗ್ರೆಸ್‌ ಪಕ್ಷವು ರಫೇಲ್‌ ಯುದ್ಧ ವಿಮಾನದ ಟೆಂಡರನ್ನು ಎಚ್‌ಎಎಲ್‌ನಿಂದ ರದ್ದುಪಡಿಸಿ ರಿಲಯನ್ಸ್‌ ಕಂಪನಿಗೆ ನೀಡಿರುವುದನ್ನು ಖಂಡಿಸಿ ಹೋರಾಟ ನಡೆಸುತ್ತಿದೆ. ಅ.13ರಂದು ರಾಜ್ಯಕ್ಕೆ ಆಗಮಿಸುತ್ತಿರುವ ರಾಹುಲ್‌ಗಾಂಧಿ ಅವರು ಎಚ್‌ಎಎಲ್‌ ಉದ್ಯೋಗಿಗಳ ಜತೆ ಸಂವಾದ ನಡೆಸಲಿದ್ದಾರೆ. 

ಬೆಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅ.13ರಂದು ರಾಜ್ಯಕ್ಕೆ ಆಗಮಿಸಲಿದ್ದು, ಕೇಂದ್ರ ಸರ್ಕಾರವು ಎಚ್‌ಎಎಲ್‌ಗೆ ನೀಡಿದ್ದ ರಫೇಲ್‌ ಯುದ್ಧ ವಿಮಾನದ ಟೆಂಡರ್‌ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಎಚ್‌ಎಎಲ್‌ ಉದ್ಯೋಗಿಗಳ ಜತೆ ಸಂವಾದ ನಡೆಸಲಿದ್ದಾರೆ.

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ ಪಕ್ಷವು ರಫೇಲ್‌ ಯುದ್ಧ ವಿಮಾನದ ಟೆಂಡರನ್ನು ಎಚ್‌ಎಎಲ್‌ನಿಂದ ರದ್ದುಪಡಿಸಿ ರಿಲಯನ್ಸ್‌ ಕಂಪನಿಗೆ ನೀಡಿರುವುದನ್ನು ಖಂಡಿಸಿ ಹೋರಾಟ ನಡೆಸುತ್ತಿದೆ. ಅ.13ರಂದು ರಾಜ್ಯಕ್ಕೆ ಆಗಮಿಸುತ್ತಿರುವ ರಾಹುಲ್‌ಗಾಂಧಿ ಅವರು ಎಚ್‌ಎಎಲ್‌ ಉದ್ಯೋಗಿಗಳ ಜತೆ ಸಂವಾದ ನಡೆಸಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯುವ ಸಾಧ್ಯತೆ ಇದೆ. ಇದ​ಲ್ಲದೆ, ಅಂದು ಕೆ.ಆರ್‌. ಪುರ​ದಲ್ಲಿ ಕಾಂಗ್ರೆಸ್‌ ಕಾರ್ಯ​ಕ​ರ್ತರ ಸಮಾ​ವೇ​ಶ​ದಲ್ಲೂ ಅವರು ಪಾಲ್ಗೊ​ಳ್ಳುವ ಸಾಧ್ಯ​ತೆ​ಯಿ​ದೆ.

ರಾಹುಲ್‌ ಗಾಂಧಿ ಅವರ ರಾಜ್ಯ ಪ್ರವಾಸ ಹಿನ್ನೆ​ಲೆ​ಯಲ್ಲಿ ಮಂಗಳವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ಸಭೆ ನಡೆಸಿದ ಕಾಂಗ್ರೆಸ್‌ ಮುಖಂಡರು ಪೂರ್ವಭಾವಿ ಸಭೆ ನಡೆ​ಸಿ​ದರು. ಈ ಸಭೆ​ಯಲ್ಲಿ ಅ.13ರಂದು ಮಧ್ಯಾಹ್ನ 3.30ರ ಸುಮಾರಿಗೆ ಎಚ್‌ಎಎಲ್‌ ಉದ್ಯೋಗಿಗಳ ಜತೆ ನಡೆಯಲಿರುವ ಸಂವಾದ ಹಾಗೂ ಬಳಿಕ ಕೆ.ಆರ್‌. ಪುರ ಕ್ಷೇತ್ರದಲ್ಲಿ ನಡೆಯಲಿರುವ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಭೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಬೆಂಗಳೂರು ನಗರ ವ್ಯಾಪ್ತಿಯ ಕಾಂಗ್ರೆಸ್‌ ಶಾಸಕರು, ಮಾಜಿ ಶಾಸಕರು ಹಾಗೂ ಬೆಂಗಳೂರು ಕಾಂಗ್ರೆಸ್‌ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಎರಡೂ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಮುಖಂಡರಿಗೆ ಸೂಚನೆ ನೀಡಲಾಯಿತು.