ನಾಳೆಯಿಂದ ರಾಹುಲ್ ಗಾಂಧಿ 2 ನೇ ಜನಾಶೀರ್ವಾದ ಯಾತ್ರೆ ಶುರು; ’ಮಹಾ’ ಮೌನ ಮುರಿಯುತ್ತಾರಾ ರಾಹುಲ್ ಗಾಂಧಿ?
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಎರಡನೇ ಹಂತದ ರಾಜ್ಯ ಪ್ರವಾಸ ನಾಳೆಯಿಂದ ಆರಂಭವಾಗುತ್ತಿದೆ.
ಬೆಂಗಳೂರು (ಫೆ.23): ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಎರಡನೇ ಹಂತದ ರಾಜ್ಯ ಪ್ರವಾಸ ನಾಳೆಯಿಂದ ಆರಂಭವಾಗುತ್ತಿದೆ.
ರಾಹುಲ್ ಗಾಂಧಿಯವರು ತಮ್ಮ ಎರಡನೆಯ ಜನಾಶೀರ್ವಾದ ಯಾತ್ರೆಯನ್ನು ಮುಂಬೈ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೈಗೊಳ್ಳುತ್ತಿದ್ದಾರೆ. ನಾಳೆಯಿಂದ ಮೂರು ದಿನಗಳ ಕಾಲ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆ ನಡೆಯಲಿದೆ.
ನಾಳೆ ಮಧ್ಯಾಹ್ನ 1 ಗಂಟೆಗೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್ ಭಾಗಿಯಾಗಿವ ಮೂಲಕ ಎರಡನೇ ಹಂತದ ಜನಾರ್ಶೀವಾದ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಳಿಕ ವಿಜಯಪುರದ ತಿಕೋಟದಲ್ಲಿ ನಡೆಯಲಿರುವ ಸ್ತ್ರೀಶಕ್ತಿ ಸಮಾವೇಶದಲ್ಲೂ ರಾಹುಲ್ ಗಾಂಧಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ...ಬಳಿಕ ವಿಜಯಪುರದ ಗಾಂಧಿ ಚೌಕ ಹಾಗು ತೋರವಿಯಲ್ಲಿ ರಾಹುಲ್ ರೋಡ್ ಶೋ ನಡೆಸಿ,ಸಾರ್ವಜನಿಕ ಸಭೆ ನಡೆಸಲಿದ್ದಾರೆ. ನಂತರ ಸಂಜೆ 6.30ಕ್ಕೆ ಚಿಕ್ಕೋಡಿಯ ಸರ್ಕಿಟ್ ಹೌಸ್ ನಲ್ಲಿ ಕಾಂಗ್ರೆಸ್ ಹಿರಿಯ ನಾಯಕರು, ಡಿಸಿಸಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ. ಸಭೆ ನಂತ್ರ ವಿಜಯಪುರದ ಸರ್ಕಿಟ್ ಹೌಸ್ ನಲ್ಲಿ ರಾಹುಲ್ ವಾಸ್ತವ್ಯ ಹೂಡಲಿದ್ದಾರೆ..
ಇನ್ನು ಮಹದಾಯಿ ವಿವಾದ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಕಾಂಗ್ರೆಸ್ ಹೈ ಕಮಾಂಡ್ , ತನ್ನ ಅಭಿಪ್ರಾಯ ಪ್ರಕಟ ಮಾಡುವ ಸಾಧ್ಯತೆ ಇದೆ. ಮುಂಬೈ ಕರ್ನಾಟಕ ಪ್ರವಾಸದಲ್ಲಿ ಕಾಂಗ್ರೆಸ್ ಅಭಿಪ್ರಾಯವನ್ನ ರಾಗಾ ಪ್ರಕಟ ಮಾಡಲಿದ್ದಾರೆ. ಇನ್ನು ಮೊದಲು ಹಂತದ ಪ್ರವಾಸದಲ್ಲಿ ಟೆಂಪಲ್ ರನ್ ಮಾಡಿದ್ದ ರಾಹುಲ್, ಎರಡನೇ ಹಂತದ ಯಾತ್ರೆಯಲ್ಲಿ ಟೆಂಪಲ್ ರನ್ ಮಾಡಲಿದ್ದಾರೆ. ಸವದತ್ತಿ ಯಲ್ಲಮ್ಮ ಸೇರಿದಂತೆ ಪುರಾತನ ದೇವಾಲಯ ಹಾಗು ದರ್ಗಾಕ್ಕೆ ರಾಹುಲ್ ಭೇಟಿ ನೀಡಲಿದ್ದಾರೆ..
ಇನ್ನು ಸಿಎಂ ಸಿದ್ದರಾಮಯ್ಯ, ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಆಸ್ಕರ್ ಫರ್ನಾಂಡೀಸ್, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯಿಲಿ, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ನ ಎಲ್ಲ ಹಿರಿಯ ನಾಯಕರು ರಾಹುಲ್ ಗಾಂಧಿಗೆ ಸಾಥ್ ಕೊಡಲಿದ್ದಾರೆ.