ಕೆಫೆ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದ ನಲಪಾಡ್
ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾತ್ರವಲ್ಲ ‘ಫರ್ಜಿ ಕೆಫೆ’ಯ ಸಿಬ್ಬಂದಿ ಮೇಲೂ ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮದ್ ನಲಪಾಡ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿದೆ ಎಂದು ಸಿಸಿಬಿ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ.
ಬೆಂಗಳೂರು : ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾತ್ರವಲ್ಲ ‘ಫರ್ಜಿ ಕೆಫೆ’ಯ ಸಿಬ್ಬಂದಿ ಮೇಲೂ ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮದ್ ನಲಪಾಡ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿದೆ ಎಂದು ಸಿಸಿಬಿ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ.
ಕಳೆದ ಫೆ. 17 ರಂದು ರಾತ್ರಿ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ 393 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ಶೀಟ್ನಲ್ಲಿ ಯುಬಿ ಸಿಟಿಯ ‘ಫರ್ಜಿಕೆಫೆ’ಯ ಮಾಲೀಕ ಸಂಸ್ಥೆ ಮ್ಯಾಸಿವ್ ರೆಸ್ಟೋರೆಂಟ್ ಪ್ರೈ. ಆಡಳಿತ ಮಂಡಳಿಯ ಉಪಾಧ್ಯಕ್ಷೆ ರೇಖಾ ಘೋಷ್ (46) ಅವರು ಗಾಯಗೊಂಡಿದ್ದಾರೆ ಎಂದು ಹೇಳಿದೆ.
ನಲಪಾಡ್ ಅಂಡ್ ಗ್ಯಾಂಗ್ ವಿದ್ವತ್ ಮೇಲೆ ಹಲ್ಲೆ ನಡೆಸುವಾಗ ರೇಖಾ ಗೋಷ್ ಮತ್ತು ಫರ್ಜಿಕೆಫೆಯಲ್ಲಿದ್ದ ಸಿಬ್ಬಂದಿ ಹಲ್ಲೆಯನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಅವರಿಗೆ ನಲಪಾಡ್ ಗ್ಯಾಂಗ್ ಎಚ್ಚರಿಕೆ ನೀಡಿತ್ತು. ವಿದ್ವತ್ ಅವರ ರಕ್ಷಣೆಗೆ ರೇಖಾ ಗೋಷ್ ಕೂಡ ತೆರಳಿದ್ದರು.
ಈ ವೇಳೆ ರೇಖಾ ಅವರ ಕೈಗೆ ಬಲವಾದ ಪೆಟ್ಟು ಬಿದ್ದಿದೆ. ಬಳಿಕ ರೇಖಾ ಅವರು ವೈದ್ಯರ ಬಳಿ ಚಿಕಿತ್ಸೆ ಪಡೆದು ಸುಮಾರು 10 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾಜ್ ಶೀರ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಫೆ. 17 ರಂದು ವಿದ್ವತ್ ತನ್ನ ಸ್ನೇಹಿತರೊಂದಿಗೆ ಊಟಕ್ಕೆಂದು ‘ಫರ್ಜಿ ಕೆಫೆ’ಗೆ ತೆರಳಿದ್ದರು. ಈ ವೇಳೆ ಅಲ್ಲಿಯೇ ನಲಪಾಡ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ.
ಪಾರ್ಟಿ ವೇಳೆ ವಿದ್ವತ್ ಕಾಲು ನಲಪಾಡ್ ತಾಗಿ ಗಲಾಟೆ ನಡೆದಿತ್ತು. ಕಾಲು ತಾಗಿದ ಬಗ್ಗೆ ಪ್ರಶ್ನಿಸಿ ನಲಪಾಡ್ ಮತ್ತು ಆತನ ಸಹಚರರು ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ಕಬ್ಬನ್ಪಾರ್ಕ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.