ಬಿಜೆಪಿ ಕಾರ್ಪೊರೇಟರ್ ಪತಿ ಕದಿರೇಶ್ ಹತ್ಯೆಯ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಮುಖಂಡ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಬೆಂಗಳೂರು: ಬಿಜೆಪಿ ಕಾರ್ಪೊರೇಟರ್ ಪತಿ ಕದಿರೇಶ್ ಹತ್ಯೆಯ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಮುಖಂಡ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಹತ್ಯೆ ಆಗುತ್ತಿದೆ, ಕರ್ನಾಟಕ ಒಂದು ಗೂಂಡಾ ರಾಜ್ಯವಾಗುತ್ತಿದೆ’, ಎಂದು ಆಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ರಾಜ್ಯ ಸರ್ಕಾರ ಈ ಹತ್ಯೆಗಳಲ್ಲೂ ರಾಜಕಾರಣ ಮಾಡುತ್ತಿದೆ, ತನಿಖೆ ಮುಂಚೆಯೇ ಹತ್ಯೆಗೆ ಕಾರಣ ಕೊಡುತ್ತಾ ಹೋಗುತ್ತೆ, ಹತ್ಯೆಯಾದ ತಕ್ಷಣವೇ ಕಾಂಗ್ರೆಸ್​ನವರು ಬಣ್ಣ ಕಟ್ಟುತ್ತಾರೆ, ಎಂದು ವಾಗ್ದಾಳಿ ನಡೆಸಿದ್ದಾರೆ.

ವಾರ್ಡ್ ನಂಬರ್ 138 ಛಲವಾದಿ ಪಾಳ್ಯರ ಕಾರ್ಪೋರೇಟರ್​ ರೇಖಾ ಪತಿ ಕದಿರೇಶನ್’ನನ್ನು ದುಷ್ಕರ್ಮಿಗಳು ಹಾಡುಹಗಲೇ ಕೊಚ್ಚಿ ಹತ್ಯೆ ಮಾಡಿದ್ದಾರೆ.

ಸಂಜೆ 4 ಗಂಟೆ ವೇಳೆಗೆ ಕಾಟನ್​ಪೇಟೆಯ ಅಂಜಿನಪ್ಪ ಗಾರ್ಡನ್​​ನಲ್ಲಿ ಕದಿರೇಶ್​ ಹತ್ಯೆ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೆಕ್ಕಿನ ಕಣ್ಣು ರಾಜೇಂದ್ರ ಸಹಚರರಿಂದ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಮೃತ ಕದಿರೇಶ್ ಕಾಟನ್​ಪೇಟೆಯಲ್ಲಿ 2002ರಲ್ಲೇ ರೌಡಿ ಶೀಟರ್ ಖಾತೆ ತೆರೆದಿದ್ದ. ಕದಿರೇಶ್​​ ವಿರುದ್ಧ ಹಲವಾರು ಶ್ರೀರಾಂಪುರ, ಕಾಟನ್​ಪೇಟೆ’ಗಳಲ್ಲಿ ಕೇಸ್’ಗಳು ದಾಖಲಾಗಿತ್ತು. ಒಟ್ಟು 15 ಪ್ರಕರಣಗಳಲ್ಲಿ ಕದಿರೇಶ್ ಆರೋಪಿಯಾಗಿದ್ದ ಎಂದು ಹೇಳಲಾಗಿದೆ.

ಕದಿರೇಶ್ ವಿರುದ್ಧದ 5 ಪ್ರಕರಣಗಳು ಖುಲಾಸೆಯಾಗಿದ್ದು, ಇನ್ನೂ 10 ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು. ಕದಿರೇಶ್​​ ವಿರುದ್ಧ ಕೊಲೆ, ಕೊಲೆಯತ್ನ. ಹಲ್ಲೆ ಬೆದರಿಕೆ ದೂರುಗಳಿತ್ತು.