ಜೆಡಿಎಸ್ - ಕಾಂಗ್ರೆಸ್ ನಡುವೆ ಭಿನ್ನಮತ ಸ್ಫೋಟ
ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಅಸಮಾಧಾನ ಸ್ಫೋಟವಾಗಿದೆ. ಸಚಿವ ಪುಟ್ಟರಂಗಶೆಟ್ಟಿ ದಸರಾ ಪೋಸ್ಟರ್ಗಳಲ್ಲೂ ತಮ್ಮ ಫೋಟೋ ಹಾಕಿಲ್ಲ ಎಂದು ಆರೋಪಿಸಿ ಸಚಿವ ಅಸಮಧಾನ ವ್ಯಕ್ತಪಡಿಸಿ ಸಭೆಯಿಂದಲೇ ಹೊರನಡೆದ ಘಟನೆ ಶುಕ್ರವಾರ ನಡೆದಿದೆ.
ಮೈಸೂರು: ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೈಸೂರು ಭಾಗದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಭಿನ್ನಮತ ಬಹಿರಂಗವಾಗಿದೆ. ದಸರೆಯ ವಿಚಾರದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ, ಪೋಸ್ಟರ್ಗಳಲ್ಲೂ ತಮ್ಮ ಫೋಟೋ ಹಾಕಿಲ್ಲ ಎಂದು ಆರೋಪಿಸಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ದಸರಾ ಕಾರ್ಯಕಾರಿ ಸಮಿತಿ ಸಭೆಯಿಂದಲೇ ಹೊರ ನಡೆದ ಪ್ರಸಂಗ ನಡೆದಿದೆ. ಶುಕ್ರವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಸಮಿತಿಯಲ್ಲಿ ತಮ್ಮನ್ನೂ ಉಪಾಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು. ನಂತರ ದಸರಾ ವೆಬ್ಸೈಟ್, ಪೋಸ್ಟರ್ಗಳನ್ನು ಬಿಡುಗಡೆಗೊಳಿಸಲಾಯಿತು. ಪೋಸ್ಟರ್ ನಲ್ಲಿ ತಮ್ಮ ಭಾವಚಿತ್ರ ಇಲ್ಲದಿರುವುದನ್ನು ಗಮನಿಸಿದ ಪುಟ್ಟರಂಗಶೆಟ್ಟಿ ಅಸಮಾಧಾನ ಹೊರಹಾಕಿದರು. ಪೋಸ್ಟರ್ಗಳಲ್ಲಿ ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಹೇಶ್, ಜಯಮಾಲ ಅವರ ಭಾವಚಿತ್ರಗಳನ್ನು ಮಾತ್ರ ಹಾಕಲಾಗಿದೆ. ಈ ಭಾಗದವನೇ ಆದ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಸಿಟ್ಟು ಪ್ರದರ್ಶಿಸಿದರು.
ಜಿ.ಟಿ. ದೇವೇಗೌಡ ಅವರನ್ನು ಬಿಟ್ಟರೆ ಇಲ್ಲಿ ನಾನೇ ಸೀನಿಯರ್. ದಸರೆಯ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ನಾನೇಕೆ ಸಭೆಯಲ್ಲಿರಬೇಕು. ಸಿದ್ದರಾಮಯ್ಯ ಬರಲಿ ಹೇಳುತ್ತೇನೆ ಎಂದು ಹೇಳಿ ಸಭೆಯಿಂದ ಅರ್ಧದಲ್ಲೇ ಹೊರನಡೆದರು.