ಸ್ವರಾಜ್ ಇಂಡಿಯಾದಿಂದ ಪುಟ್ಟಣ್ಣಯ್ಯ ಪುತ್ರ ಕಣಕ್ಕೆ
ರೈತ ಮುಖಂಡ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಣ್ಣಟ್ಟಯ್ಯ ಸೇರಿದಂತೆ ಆರು ಅಭ್ಯರ್ಥಿಗಳ ಪಟ್ಟಿಯನ್ನು ಸ್ವರಾಜ್ ಇಂಡಿಯಾ ಪಕ್ಷ ಪ್ರಕಟಿಸಿದ್ದು, ಎರಡನೇ ಹಂತದ ಪಟ್ಟಿಯನ್ನು ಏ.12ಕ್ಕೆ ಬಿಡುಗಡೆ ಮಾಡಲಿದೆ.
ಬೆಂಗಳೂರು : ರೈತ ಮುಖಂಡ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಣ್ಣಟ್ಟಯ್ಯ ಸೇರಿದಂತೆ ಆರು ಅಭ್ಯರ್ಥಿಗಳ ಪಟ್ಟಿಯನ್ನು ಸ್ವರಾಜ್ ಇಂಡಿಯಾ ಪಕ್ಷ ಪ್ರಕಟಿಸಿದ್ದು, ಎರಡನೇ ಹಂತದ ಪಟ್ಟಿಯನ್ನು ಏ.12ಕ್ಕೆ ಬಿಡುಗಡೆ ಮಾಡಲಿದೆ.
ಸ್ವರಾಜ್ ಇಂಡಿಯಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಯಾದವ್ ಅವರು ಮಂಗಳವಾರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಲು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಅಂತೆಯೇ, ಮದ್ದೂರು ಕ್ಷೇತ್ರದಿಂದ ಎಸ್.ಎಚ್. ಲಿಂಗೇಗೌಡ, ಯಾದಗಿರಿ ಕ್ಷೇತ್ರದಿಂದ ವೈಜನಾಥ್ ಪಾಟೀಲ್, ಮಹದೇವಪುರ ಕ್ಷೇತದಿಂದ ರಮೇಶ್ ಚಂದ್ರ, ಚಳ್ಳಕೆರೆ ಕ್ಷೇತ್ರದಿಂದ ಕೆ.ಪಿ.ಭೂತಯ್ಯ ಮತ್ತು ಹನೂರು ಕ್ಷೇತ್ರದಿಂದ ಶೈಲೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ.
ರಾಜ್ಯಾಧ್ಯಕ್ಷರಾಗಿ ಚಾಮರಸ ಆಯ್ಕೆ:
ಇದೇ ವೇಳೆ ಪಕ್ಷದ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯು ಸಹ ನಡೆಸಲಾಯಿತು. ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಚಾಮರಸ ಮಾಲಿಪಾಟೀಲ್ ಆಯ್ಕೆ ಆಗಿದ್ದಾರೆ.
ಉಪಾಧ್ಯಕ್ಷರಾಗಿ ಚುಕ್ಕಿ ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ 15ಕ್ಕೂ ಹೆಚ್ಚು ಮಂದಿಯನ್ನು ಪದಾಧಿಕಾರಿಯನ್ನಾಗಿ ನೇಮಿಸಲಾಯಿತು. ಪಕ್ಷದ ಸಂಘಟನೆ ಕುರಿತು ನಡೆದ ಸಭೆಯಲ್ಲಿ ಚುನಾವಣೆ ಸಿದ್ಧತೆ ಬಗ್ಗೆ ಸಮಾಲೋಚಿಸಲಾಯಿತು.
ಪಕ್ಷದ ಅಭ್ಯರ್ಥಿಗಳು ಗೆಲ್ಲುವುದಕ್ಕಿಂತ ಮುಖ್ಯವಾಗಿ ಜನರ ಮನದಲ್ಲಿ ಅಭ್ಯರ್ಥಿಗಳು ಬದಲಾವಣೆ ತರುವ ಉದ್ದೇಶ ಹೊಂದಿದ್ದಾರೆ ಎಂಬ ಮನೋಭಾವ ಮೂಡಿಸಬೇಕು. ಇದರಿಂದ ಪಕ್ಷದ ಅಭ್ಯರ್ಥಿಯ ಬಗ್ಗೆ ಸಕಾರಾತ್ಮಕ ಯೋಚನೆಗಳು ಮೂಡಲಿವೆ ಎಂದು ಯೋಗೇಂದ್ರ ಯಾದವ್ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರಿಗೆ ತಿಳಿಸಿದರು.