* ಶಿವಾನಂದ ಸರ್ಕಲ್ ನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಬೇಡಿ; ಬದಲಿಗೆ ಸರ್ಕಲ್ ಬಳಿಯ ರೈಲ್ವೆ ಅಂಡರ್ ಪಾಸ್ ವಿಸ್ತರಿಸಿ* ಬ್ರಿಡ್ಜ್ ನಿರ್ಮಾಣ  ವಿರೋಧಿಸಿ ಸ್ಥಳೀಯರು, ಪರಿಸರ ಪ್ರೇಮಿಗಳ ವಿರೋಧ* ಬ್ರಿಡ್ಜ್ ನಿರ್ಮಾಣದಿಂದ 40 ಕ್ಕೂ ಹೆಚ್ಚು ಮರಗಳ ಮಾರಣ ಹೋಮ* 50 ಕೋಟಿ ವೆಚ್ಚದ ಯೋಜನೆ ಕೈ ಬಿಡಲು ಸಾರ್ವಜನಿಕರ ಆಗ್ರಹ

ಬೆಂಗಳೂರು(ಜುಲೈ 23): ಸ್ಟೀಲ್​ ಫ್ಲೈಓವರ್​ ವಿರುದ್ಧ ಆಕ್ರೋಶ ಮತ್ತಷ್ಟು ಹೆಚ್ಚಾಗ್ತಿದೆ. ಶಿವಾನಂದ ಸರ್ಕಲ್'ನಿಂದ ರೈಲ್ವೆ ಬ್ರಿಡ್ಜ್'ವರೆಗೆ ಸ್ಟೀಲ್ ಫ್ಲೈಓವರ್​ ನಿರ್ಮಿಸಲು ಮುಂದಾಗಿದೆ. ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಶಿವಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯ್ತು. ಶಿವಾನಂದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಮೌನ ಪ್ರತಿಭಟನೆ ನಡೆಸಿದ್ರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯ ಸರ್ಕಾರ ಸುಮಾರು 50 ಕೋಟಿ ರೂ ವೆಚ್ಚದಲ್ಲಿ ಈ ಉಕ್ಕಿನ ಮೇಲ್ಸೇತುವೆ ಯೋಜನೆಗೆ ಮುಂದಾಗಿದೆ. ಇದರಿಂದ ನಾಗರಿಕರಿಗೆ ಯಾವುದೇ ಪ್ರಯೋಜನವಿಲ್ಲ. 40 ಕ್ಕೂ ಹೆಚ್ಚು ಮರಗಳ ಮಾರಣ ಹೋಮ ನಡೆಯಲಿದೆ. ಇದರ ಬದಲಿಗೆ ಶಿವಾನಂದ ಸರ್ಕಲ್ ಬಳಿ ಇರೋ ರೈಲ್ವೆ ಅಂಡರ್'ಪಾಸ್ ಅನ್ನು ವಿಸ್ತರಿಸಬೇಕು ಎಂದು ಕೋರಿದ್ದಾರೆ.

ಈ ಹಿಂದೆ ರಾಜ್ಯ ಸರ್ಕಾರ ಚಾಲುಕ್ಯ ಸರ್ಕಲ್'ನಿಂದ ಹೆಬ್ಬಾಳದವರೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾಗಿತ್ತು. ಸಾರ್ವಜನಿಕರ ವಿರೊಧಕ್ಕೆ ಮಣಿದು 2000 ಕೋಟಿ ಯೋಜನೆ ಕೈಬಿಟ್ಟಿತ್ತು. ಈಗ ಶಿವಾನಂದ ವೃತ್ತದಲ್ಲಿ ಮಾಡಹೊರಟಿರುವ ಯೋಜನೆ ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ. ನಗರದ ವಿವಿಧ ಸ್ಥಳಗಳಲ್ಲಿ ಪುಟ್ಟ ಸ್ಟೀಲ್ ಬ್ರಿಡ್ಜ್'ಗಳನ್ನು ನಿರ್ಮಿಸುವ ಉದ್ದೇಶವಿಟ್ಟುಕೊಂಡಿರುವ ಸರಕಾರ ಈಗ ಪರಿಸರ ಪ್ರೇಮಿಗಳ ಕೂಗಿಗೆ ಮತ್ತೆ ಓಗೊಡುತ್ತಾ ಎಂದು ಕಾದುನೋಡಬೇಕು.

- ಪ್ರಿಯಾಂಕಾ ತಲವಾರ್, ಸುವರ್ಣ ನ್ಯೂಸ್, ಬೆಂಗಳೂರು