ಹಿಂದಿ ಭಾಷಾ ಹೇರಿಕೆ ಸಂಸ್ಕೃತಿ ನಾಶಕ್ಕೆ ಮುನ್ನುಡಿ: ಮನು ಬಳಿಗಾರ್
ಭಾರತ ಬಹುಭಾಷಾ ಸಂಸ್ಕೃತಿ ಹೊಂದಿರುವ ದೇಶ. ಸಂವಿಧಾನದಲ್ಲಿ ಒಟ್ಟು 22 ಭಾಷೆಗಳಿಗೆ ಮಾನ್ಯತೆ ಸಿಕ್ಕದೆ. ಆದರೆ, ಹಿಂದಿ ಭಾಷೆ ಕಡ್ಡಾಯಗೊಳಿಸುವ ಪ್ರಕ್ರಿಯೆ ಸರಿಯಲ್ಲ. ರಾಷ್ಟ್ರದಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಹಿಂದಿ ಭಾಷೆ ಕಡ್ಡಾಯ ಮಾಡಲು ಹೊರಟಿರುವುದು ಕೇಂದ್ರ ಸರ್ಕಾರದ ಪ್ರಾದೇಶಿಕ ಭಾಷಾ ವಿರೋಧಿ ಧೋರಣೆಯಾಗಿದೆ ಎಂದು ಹೇಳಿದರು.
ಬೆಂಗಳೂರು : ಆಯಾ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಗಳಲ್ಲಿ ಆಡಳಿತ ನಡೆಸಬೇಕು ಆದರೆ, ಕೇಂದ್ರ ಸರ್ಕಾರ ಈಗ ಹಿಂದಿ ಅಧಿಕೃತ ಭಾಷೆಯನ್ನಾಗಿ ಮಾಡಲು ಹೊರಟಿರುವುದು ಖಂಡನಾರ್ಹ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದ್ದಾರೆ.
ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಮಂಗಳವಾರ ನಗರದ ಪುರಭವನದ ಮುಂದೆ ಆಯೋಜಿಸಿದ್ದ ‘ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ಬೃಹತ್ ಪ್ರತಿಭಟನೆ'ಯಲ್ಲಿ ಮಾತನಾಡಿದರು.
ಭಾರತ ಬಹುಭಾಷಾ ಸಂಸ್ಕೃತಿ ಹೊಂದಿರುವ ದೇಶ. ಸಂವಿಧಾನದಲ್ಲಿ ಒಟ್ಟು 22 ಭಾಷೆಗಳಿಗೆ ಮಾನ್ಯತೆ ಸಿಕ್ಕದೆ. ಆದರೆ, ಹಿಂದಿ ಭಾಷೆ ಕಡ್ಡಾಯಗೊಳಿಸುವ ಪ್ರಕ್ರಿಯೆ ಸರಿಯಲ್ಲ. ರಾಷ್ಟ್ರದಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಹಿಂದಿ ಭಾಷೆ ಕಡ್ಡಾಯ ಮಾಡಲು ಹೊರಟಿರುವುದು ಕೇಂದ್ರ ಸರ್ಕಾರದ ಪ್ರಾದೇಶಿಕ ಭಾಷಾ ವಿರೋಧಿ ಧೋರಣೆಯಾಗಿದೆ ಎಂದು ಹೇಳಿದರು.
ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ದೇಶದಲ್ಲಿ ಹಿಂದಿ ಭಾಷೆ ಹೇರಿಕೆಗೆ ಚಿಂತನೆ ನಡೆದಿದ್ದು, ದಕ್ಷಿಣ ಭಾರತದ ಸಂಸ್ಕೃತಿ ಸಂಪೂರ್ಣ ನಾಶ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ದ್ರಾವಿಡ ಭಾಷೆಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಶತಮಾನಗಳಿಂದಲೂ ಇದೆ. ರಾಷ್ಟ್ರೀಯ ಒಕ್ಕೂಟ ವ್ಯವಸ್ಥೆ ಒಂದೇ ಇರಬೇಕು ಎಂಬ ಕಾರಣಕ್ಕೆ ಎಲ್ಲ ರಾಜ್ಯಗಳೂ ಅದಕ್ಕೆ ಒಪ್ಪಿಗೆ ಸೂಚಿಸಿದ್ದವು. ಆದರೂ ದಕ್ಷಿಣ ರಾಜ್ಯಗಳ ಮೇಲೆ ದಬ್ಬಾಳಿಕೆ ಮರುಕಳಿಸುತ್ತಿದೆ. ಉತ್ತರ ಭಾರತದ ರಾಜ್ಯಗಳಿಗೆ ದ್ವಿಭಾಷಾ, ದಕ್ಷಿಣ ಭಾರತದ ರಾಜ್ಯಗಳಿಗೆ ತ್ರಿಭಾಷಾ ಸೂತ್ರ ಅಳವಡಿಸಲಾಗಿದೆ. ಹಿಂದಿ ಕಲಿಯಬೇಕೆಂಬ ನೀತಿ ಸರಿಯಲ್ಲ ಎಂಬ ವಿಷಯವನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯದ ಸಂಸದರು ಕೈಜೋಡಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಕೇಂದ್ರ ಸರ್ಕಾರ ನಮ್ಮ ಆಹಾರದ ಹಕ್ಕಿನ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಈಗ ಹಿಂದಿ ಮೂಲಕ ನಮ್ಮ ಮೇಲೆ ಸವಾರಿ ಮಾಡುತ್ತಿದೆ. ಇದರಿಂದ ನಮ್ಮ ಭಾಷೆ, ಸಂಸ್ಕೃತಿ ನಶಿಸುವುದು ಖಚಿತ. ಹಾಗಾಗಿ ಈ ಬಲವಂತದ ಹೇರಿಕೆಗೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ, ಶಿಕ್ಷಣ ತಜ್ಞ ಜಿ.ರಾಮಕೃಷ್ಣ, ಸಾಹಿತಿ ಜರಗನಹಳ್ಳಿ ಶಿವಶಂಕರ್, ಡಾ.ಕೋ.ವೆಂ.ರಾಮ ಕೃಷ್ಣೇಗೌಡ, ಬೆಂ.ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.