ಚಿತ್ತಾಪುರ ಬದಲು ಬೇರೆಡೆ ಸ್ಪರ್ಧೆ ವದಂತಿ: ಪ್ರಿಯಾಂಕ್
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾನು ಕ್ಷೇತ್ರ ತೊರೆಯುತ್ತಿದ್ದೇನೆ ಎಂದು ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡಿ, ವದಂತಿ ಹಬ್ಬಿಸಲಾಗುತ್ತಿದೆ.
ಚಿತ್ತಾಪುರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾನು ಕ್ಷೇತ್ರ ತೊರೆಯುತ್ತಿದ್ದೇನೆ ಎಂದು ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡಿ, ವದಂತಿ ಹಬ್ಬಿಸಲಾಗುತ್ತಿದೆ. ನಾನು ಯಾವುದೇ ಕಾರಣಕ್ಕೂ ಚಿತ್ತಾಪುರ ಕ್ಷೇತ್ರವನ್ನು ಬಿಟ್ಟು ಬೇರೆಡೆ ಹೋಗುವುದಿಲ್ಲ ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ದೂರವಾಣಿ ಮೂಲಕ ಮಾತನಾಡಿರುವ ಅವರು, ಶಾಸಕನಾಗಿ ನಾಲ್ಕೂವರೆ ವರ್ಷದಲ್ಲಿ ನನ್ನ ಕ್ಷೇತ್ರಕ್ಕೆ ಸಾಕಷ್ಟುಕೊಡುಗೆ ನೀಡಿದ್ದೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸೊಲು- ಗೆಲುವಿಗೆ ಹೆದರುವುದಿಲ್ಲ. ಮೊದಲ ಚುನಾವಣೆಯಲ್ಲಿ ಸೋತಿದ್ದರೂ, ನಂತರದ ಚುನಾವಣೆಯಲ್ಲಿ ಜನ 31 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಹೀಗಾಗಿ, ನನಗೆ ಸೋಲು, ಗೆಲುವು ಎರಡರ ಅನುಭವವೂ ಆಗಿದೆ. ಇದನ್ನು ಸಹಿಸದ ವಿರೋಧ ಪಕ್ಷದವರು ಇಂತಹ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮತದಾರರ ಆಶೀರ್ವಾದ ಇರುವವರೆಗೆ ನನ್ನನ್ನು ಯಾರೂ ಏನೂ ಮಾಡಲು ಆಗಲ್ಲ. ಮತದಾರರು ಯಾವುದೇ ಕಾರಣಕ್ಕೂ ಗೊಂದಲಕ್ಕೊಳಗಾಗಬಾರದು ಎಂದು ತಿಳಿಸಿದ್ದಾರೆ.